ADVERTISEMENT

ಮೈಸೂರು: ನಿರಂಜನ ಮಠ; ಭುಗಿಲೆದ್ದ ಮತ್ತೊಂದು ವಿವಾದ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 7:23 IST
Last Updated 31 ಜುಲೈ 2021, 7:23 IST
ಮೈಸೂರಿನ ನಿರಂಜನ ಮಠವು ವೀರಶೈವ ಲಿಂಗಾಯತ ಪರಂಪರೆಗೆ ಸೇರಿದ್ದೆಂದು ಕೆಲವರು ಮಠದ ಆವರಣದಲ್ಲಿ ಶುಕ್ರವಾರ ಅಹೊರಾತ್ರಿ ಧರಣಿ ನಡೆಸಿದರು
ಮೈಸೂರಿನ ನಿರಂಜನ ಮಠವು ವೀರಶೈವ ಲಿಂಗಾಯತ ಪರಂಪರೆಗೆ ಸೇರಿದ್ದೆಂದು ಕೆಲವರು ಮಠದ ಆವರಣದಲ್ಲಿ ಶುಕ್ರವಾರ ಅಹೊರಾತ್ರಿ ಧರಣಿ ನಡೆಸಿದರು   

ಮೈಸೂರು: ರಾಮಕೃಷ್ಣ ಆಶ್ರಮ ಹಾಗೂ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ನಡುವಿನ ವಿವಾದದ ಮಧ್ಯೆಯೇ ಮತ್ತೊಂದು ವಿವಾದ ಶುಕ್ರವಾರ ಭುಗಿಲೆದ್ದಿದೆ. ನಿರಂಜನ ಮಠವು ವೀರಶೈವ ಲಿಂಗಾಯತ ಪರಂಪರೆಗೆ ಸೇರಿದ್ದಾಗಿದೆ ಎಂದು ಕೆಲವು ಸಂಘಟನೆಗಳ ಸದಸ್ಯರು ಇಲ್ಲಿ ಪ್ರತಿಭಟನೆ ಆರಂಭಿಸಿದರು.

ಮಠದಲ್ಲಿನ ವೀರಶೈವ ಲಿಂಗಾಯತ ಪರಂಪರೆಯ ಕೆಲವು ಕುರುಹುಗಳನ್ನು ರಾಮಕೃಷ್ಣ ಆಶ್ರಮದವರು ಅಳಿಸಿ ಹಾಕುತ್ತಿದ್ದಾರೆ ಎಂದು ಕೆಲವರು ದೂರಿದರು.

ಹೊಸಮಠದ ಚಿದಾನಂದಸ್ವಾಮೀಜಿ ಸೇರಿದಂತೆ ಬಸವ ಬಳಗದ ಒಕ್ಕೂಟ, ಜಿಲ್ಲಾ ವೀರಶೈವ ಲಿಂಗಾಯತ ಒಕ್ಕೂಟದ ಸುಮಾರು 50ಕ್ಕೂ ಹೆಚ್ಚು ಸದಸ್ಯರು ಮಠವನ್ನು ಪರಿಶೀಲಿಸಿದರು.

ADVERTISEMENT

ಈ ವೇಳೆ ದಕ್ಷಿಣಾಮೂರ್ತಿಯ ವಿಗ್ರಹವನ್ನು ಕದಲಿಸಿರುವುದು ಏಕೆ ಎಂದು ಮಠದಲ್ಲಿದ್ದ ರಾಮಕೃಷ್ಣ ಆಶ್ರಮದ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು. ಮರದ ಬೇರು ವಿಗ್ರಹದ ಕೆಳಗೆ ತೂರಿ ಬಂದು ವಿಗ್ರಹವು ವಾಲಿತ್ತು. ಹಾಗಾಗಿ, ಇದನ್ನು ತೆಗೆದು ಬೇರೆ ಕಡೆ ಪ್ರತಿಷ್ಠಾಪಿಸಲಾಗುವುದು ಎಂಬ ರಾಮಕೃಷ್ಣ ಆಶ್ರಮದ ಪ್ರತಿನಿಧಿಗಳ ಸಮಜಾಯಿಷಿಗೆ ಒಪ್ಪದ ಕೆಲವರು ಪ್ರತಿಭಟನೆ ಆರಂಭಿಸಿದರು. ಮತ್ತೆ ಕೆಲವರು ಭಜನೆ ನಡೆಸಿದರು. ಅಹೋರಾತ್ರಿ ಧರಣಿ ಮುಂದುವರಿಯಿತು. ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.