ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ತಿ.ನರಸೀಪುರ: ಬನ್ನೂರಿನ ಸುಭಾಷ್ ನಗರಕ್ಕೆ ಮೀಸಲಿಟ್ಟ ಸ್ಮಶಾನಕ್ಕೆ ಸಂಪರ್ಕ ರಸ್ತೆ ಕಲ್ಪಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದ ಅಧಿಕಾರಿಗಳು ಇದುವರೆಗೂ ಕ್ರಮ ಕೈಗೊಂಡಿಲ್ಲ. 15 ದಿನಗಳಲ್ಲಿ ಸಂಪರ್ಕ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಬನ್ನೂರು ಪುರಸಭಾ ಸದಸ್ಯ ಶಿವಣ್ಣ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಶಾನಕ್ಕೆ ರಸ್ತೆ ಕಲ್ಪಿಸಿ ಕೊಡುವಂತೆ ಬನ್ನೂರಿನ ಕಾವೇರಿ ವೃತ್ತದಲ್ಲಿ ಶವವಿಟ್ಟು ನಾಲ್ಕು ತಿಂಗಳ ಹಿಂದೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದ ವೇಳೆ, ಉಪ ವಿಭಾಗಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಫೆಬ್ರುವರಿ ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿ ಕಾಮಗಾರಿಯನ್ನು ಆರಂಭಿಸುವ ಭರವಸೆ ನೀಡಿದ್ದರು ಅಧಿಕಾರಿಗಳು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಇನ್ನೆರಡು ವಾರದಲ್ಲಿ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಬನ್ನೂರಿನ ಕಾವೇರಿ ವೃತ್ತದಲ್ಲಿ ಅನಿರ್ದಿಷ್ಟಾವಧಿಯ ಧರಣಿಯನ್ನು ಆರಂಭಿಸುವುದಾಗಿ ತಿಳಿಸಿದರು.
ಬಾಬು ಜಗಜೀವನ್ ರಾಂ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಶಂಕರ್ ಮಾತನಾಡಿ, ಉಪ ವಿಭಾಗಾಧಿಕಾರಿ ಕಾಮಗಾರಿ ಪ್ರಾರಂಭಕ್ಕೆ ವಿಳಂಬ ಮಾಡುತ್ತಿರುವುದರಿಂದ ಮೇ ತಿಂಗಳ ಅಂತ್ಯದ ವರೆಗೆ ಕಾಮಗಾರಿ ಆರಂಭಕ್ಕೆ ಕಾಲಾವಕಾಶ ನೀಡಿದ್ದು, ಶೀಘ್ರ ಕಾಮಗಾರಿ ಪ್ರಾರಂಭ ಮಾಡದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು.
ಸಂಘದ ಉಪಾಧ್ಯಕ್ಷರಾದ ಸಿದ್ದನಹುಂಡಿ ಗೋವಿಂದರಾಜು, ಮಹದೇವಣ್ಣ, ಪ್ರಧಾನ ಕಾರ್ಯದರ್ಶಿ ಮಾದೇಶ್, ಸದಸ್ಯರಾದ ಕಳ್ಳಿಪುರ ಶಿವಪ್ರಸಾದ್, ಕೇತಹಳ್ಳಿ ಸಿದ್ದರಾಜು, ಬನ್ನೂರು ಸ್ವಾಮಿ, ರಜಿನಿ ರಾಜ್, ರಾಜಪ್ಪ ಗೋಪಾಲಪುರ, ಸಿದ್ದನಹುಂಡಿ ಶಿವಣ್ಣ, ಲಿಂಗರಾಜು ವಿಜಯಪುರ, ಶ್ರೀಕಾಂತ್, ಮಲ್ಲೇಶ್, ಆರ್.ಶಂಕರ್, ರಾಜಪ್ಪ, ಮಹದೇವು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.