ADVERTISEMENT

ನಂಜನಗೂಡಿನ ಕ್ರಿಯಾನ್ ಟೆಕ್ಸ್ ಕೆಮ್ ಕಾರ್ಖಾನೆಗೆ ಬೀಗ; ಕಾರ್ಮಿಕರ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 3:38 IST
Last Updated 2 ಸೆಪ್ಟೆಂಬರ್ 2021, 3:38 IST
ನಂಜನಗೂಡು ತಾಲ್ಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದ ಕ್ರಿಯಾನ್ ಟೆಕ್ಸ್ ಕೆಮ್ ಕಾರ್ಖಾನೆ ಎದುರು ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ
ನಂಜನಗೂಡು ತಾಲ್ಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದ ಕ್ರಿಯಾನ್ ಟೆಕ್ಸ್ ಕೆಮ್ ಕಾರ್ಖಾನೆ ಎದುರು ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ   

ನಂಜನಗೂಡು: ತಾಲ್ಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದ ಕ್ರಿಯಾನ್‌ ಟೆಕ್ಸ್ ಕೆಮ್ ಕಾರ್ಖಾನೆಗೆ ಬೀಗ ಹಾಕಿರುವುದನ್ನು ಖಂಡಿಸಿ ಕಾರ್ಖಾನೆಯ 400ಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆ ಮುಂಭಾಗ ಬುಧವಾರಅಹೋರಾತ್ರಿ ಧರಣಿ ನಡೆಸಿದರು.

ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದ ಕಾರ್ಮಿಕರು ಕಾರ್ಖಾನೆಯ ಒಳಗೆ ಉಳಿದಿದ್ದರು. ಬುಧವಾರ ಬೆಳಗಿನ ಪಾಳಿಯಲ್ಲಿ ಕೆಲಸ ನಿರ್ವಹಿಸಲು ತೆರಳಿದ್ದ ಕಾರ್ಮಿಕರಿಗೆ, ಬೀಗಮುದ್ರೆ ಘೋಷಿಸಿ ರುವುದು ಗೊತ್ತಾಗಿತ್ತು. ಕಾರ್ಖಾನೆ ಒಳಗೆ ಇರುವ ಕಾರ್ಮಿಕರ ಪೈಕಿ ಕೆಲವರನ್ನು ಇನ್ನೂ ಹೊರಗೆ ಬಿಟ್ಟಿಲ್ಲ.

ಎಐಯುಟಿಯುಸಿ ಜಿಲ್ಲಾ ಘಟಕದ ಜಂಟಿ ಕಾರ್ಯದರ್ಶಿ ಮುದ್ದು ಕೃಷ್ಣ ಮಾತನಾಡಿ, ‘ಕಾರ್ಖಾನೆಯಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಕಳೆದ 22 ವರ್ಷಗಳಿಂದ ದುಡಿಯುತ್ತಿದ್ದಾರೆ. ಕಾರ್ಮಿಕರ ಗ್ರಾಜ್ಯುಟಿ ಹಣ ನೀಡುವಂತೆ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ,
ಏಕಾಏಕಿ ಮಂಗಳವಾರ ರಾತ್ರಿ ಪಾಳಿಯಿಂದ ಬೀಗಮುದ್ರೆ ಘೋಷಿಸಿ, ನೋಟಿಸ್ ಅಂಟಿಸಿದ್ದಾರೆ’ ಎಂದು ದೂರಿದರು.

ADVERTISEMENT

‘ಕಾರ್ಖಾನೆಯಲ್ಲಿ ಕಾರ್ಮಿಕ ಸಂಘಟನೆ ರಚಿಸಿಕೊಳ್ಳಬಾರದು. ಸಂಘಟನೆ ಆರಂಭಿಸಿದರೆ ಕಾರ್ಖಾನೆ ಯನ್ನು ಮುಚ್ಚುತ್ತೇವೆ ಎಂದು ಆಡಳಿತ ಮಂಡಳಿ ಬೆದರಿಕೆ ಒಡ್ಡಿತ್ತು. ಕಾರ್ಮಿಕರ ಪರವಾಗಿ ನ್ಯಾಯಯುತ ಬೇಡಿಕೆ ಸಲ್ಲಿಸಿದ 6 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಸಂವಿಧಾನಬದ್ಧ ಹಕ್ಕುಗಳನ್ನು ನಿರಾಕರಿಸುವ ಕಾರ್ಖಾನೆಯ ಅಧಿಕಾರಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ರಾಜೇಶ್ ಕೆ.ಜಾಧವ್ ಭೇಟಿ ನೀಡಿ ಕಾರ್ಮಿಕ ರೊಂದಿಗೆ ಮಾತನಾಡಿ, ‘ಬೆಂಗಳೂರಿನ ಉಪ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ, ಕಾರ್ಮಿಕ ಮುಖಂಡರ ಸಭೆ ಗುರುವಾರ ನಡೆಯಲಿದೆ. ನಿಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಹೇಳಿದರು.

‌ಕಾರ್ಮಿಕ ನಿರೀಕ್ಷಕ ಮಾದಪ್ಪ, ಕಾರ್ಮಿಕ ಸಂಘಟನೆ ಉಪಾಧ್ಯಕ್ಷ ಸುರೇಶ್ ಶಂಕರೇಗೌಡ, ಮುಖಂಡರಾದ ಲೋಕೇಶ್, ವಿಕ್ರಂ, ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.