ಮೈಸೂರು: ‘ಸಾಹಿತ್ಯವು ಧರ್ಮ, ನೀತಿಯನ್ನು ಹೇಳುವ ಒಂದು ವಾಹಕವಾಗಿತ್ತು. ಆದರೆ ಇದೀಗ ಈ ಉದ್ದೇಶವೇ ಸಂಪೂರ್ಣ ಬದಲಾಗುತ್ತಿದೆ’ ಎಂದು ಜನಪದ ವಿದ್ವಾಂಸ ಪ್ರೊ.ಎಂ.ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು.
ವಿಜಯನಗರದಲ್ಲಿನ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರವೂ ನಡೆಸಿದ ‘ದಸರಾ ಪ್ರಧಾನ ಕವಿಗೋಷ್ಠಿ’ ಉದ್ಘಾಟಿಸಿದ ಅವರು ಮಾತನಾಡಿ, ‘ಹೂವಿನ ಹಾರವಾಗಬೇಕಿದ್ದ ಕಾವ್ಯ ಖಡ್ಗವಾಗುತ್ತಿದೆ. ಸಿಂಹಾಸನ ಬದಲಿಸಬೇಕು. ಸರ್ಕಾರ, ರಾಜ್ಯವನ್ನು ಬದಲಾಯಿಸಬೇಕು ಎನ್ನುವುದು ಕಾವ್ಯದ ಆಸೆಯಾಗುತ್ತಿದೆ’ ಎಂದರು.
‘ಕೆಲವರಿಗಂತೂ ಕವಿತೆಯಿಂದ ಏನು ಬೇಕುಎಂಬ ಬಗ್ಗೆ ಅವರಿಗೇನೇ ಸ್ಪಷ್ಟತೆ ಎಂಬುದೇ ಇಲ್ಲವಾಗಿದೆ. ಕಾವ್ಯವನ್ನು ಸಮಾಜ ಸುಧಾರಣೆಗಾಗಿ ಬರೆಯುತ್ತೇವಾ ಅಥವಾ ಆತ್ಮಸಂತೋಷಕ್ಕೆ ಬರೆಯುತ್ತೇವಾ ಎಂಬುದನ್ನು ಈ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳಬೇಕು’ ಎಂದು ಕೃಷ್ಣೇಗೌಡ ಚಾಟಿ ಬೀಸಿದರು.
‘ಜೋಗಿ ಸದಾ ಒಳಗೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು, ತಾಯಿ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು...’ ಹಾಡನ್ನು ಜನಪದ ಶೈಲಿಯಲ್ಲಿ ಕೃಷ್ಣೇಗೌಡ ಹಾಡಿದ ಪರಿಗೆ ನೆರೆದಿದ್ದವರಿಂದ ಕರತಾಡನದ ಮೆಚ್ಚುಗೆ ವ್ಯಕ್ತವಾಯಿತು.
ವಿದುಷಿ ಆರ್.ಸಿ.ರಾಜಲಕ್ಷ್ಮೀ ‘ನಾದ ವೈಭವ’ ಶೀರ್ಷಿಕೆಯಡಿ ಕವಿತೆ ಓದಿದರು.
ಮಾಜಿ ಶಾಸಕ ವಾಸು ಮಾತನಾಡಿ ‘ಪ್ರಸ್ತುತ ಪ್ರಾಮಾಣಿಕತೆಗೂ, ಭ್ರಷ್ಟಾಚಾರಕ್ಕೂ ಎಳೆಯಷ್ಟೇ ಅಂತರವಿದೆ. ಆ ಅಂತರದಲ್ಲಿ ಭ್ರಷ್ಟಾಚಾರ ನಿಗ್ರಹದಳ ಕುಳಿತಿದೆ. ಈ ಬಿರುಕನ್ನು ದೊಡ್ಡದು ಮಾಡುವ ನಿಟ್ಟಿನಲ್ಲಿ ಕವಿತೆಗಳು ಮೂಡಿ ಬರಬೇಕು. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಉತ್ತಮ ವಿಷಯಗಳ ಚರ್ಚೆ ಆಗಬೇಕು’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೈ.ಡಿ.ರಾಜಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ, ಪೊಲೀಸ್ ಅಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕದಂಬ ರಂಗ ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.