ADVERTISEMENT

ವರ್ಷದ ಮೊದಲ ಮಳೆಗೆ ತಂಪಾದ ಇಳೆ

ಮಣ್ಣಿನಿಂದ ಹೊಮ್ಮಿದ ಸುವಾಸನೆ, ಆರ್ಭಟಿಸಿದ ಗುಡುಗು, ಸಿಡಿಲುಗಳು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 18:53 IST
Last Updated 10 ಫೆಬ್ರುವರಿ 2019, 18:53 IST
ಮೈಸೂರಿನಲ್ಲಿ ಭಾನುವಾರ ಸುರಿದ ವರ್ಷದ ಮೊದಲ ಮಳೆಯಲ್ಲಿ ವಾಹನಗಳು ಸಾಗಿದವು.
ಮೈಸೂರಿನಲ್ಲಿ ಭಾನುವಾರ ಸುರಿದ ವರ್ಷದ ಮೊದಲ ಮಳೆಯಲ್ಲಿ ವಾಹನಗಳು ಸಾಗಿದವು.   

ಮೈಸೂರು: ಜಿಲ್ಲೆಯಲ್ಲಿ ಭಾನುವಾರ ವರ್ಷದ ಮೊದಲ ಮಳೆ ಗುಡುಗು, ಸಿಡಿಲುಗಳಿಂದ ಆರ್ಭಟಿಸುತ ಸುರಿಯಿತು. ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಏರಿಕೆಯಾಗಿದ್ದ ಉಷ್ಣಾಂಶವು ಹದವಾದ ಮಳೆಗೆ ತಂಪಾಯಿತು.

ನಾಗರಹೊಳೆ ಹುಲಿ ರಕ್ಷಿತಾರಣ್ಯದ ಕೆಲವು ಭಾಗಗಳಲ್ಲಿ ಮಳೆ ಸುರಿದಿರುವುದು ಕಾಳ್ಗಿಚ್ಚಿನ ಭೀತಿಯನ್ನು ದೂರ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಿದ್ದಿರುವ ಮಳೆಯು ರೈತರಲ್ಲಿ ಹರ್ಷ ತರಿಸಿದೆ.

ಮುಂಗಾರುಪೂರ್ವದ ಮಳೆಯ ಆರ್ಭಟ ತುಸು ಜೋರಾಗಿಯೇ ಇತ್ತು. ಗುಡುಗು, ಮಿಂಚುಗಳ ಜತೆಗೆ ಆರ್ಭಟಿಸಿದ ಸಿಡಿಲುಗಳಿಂದ ಮಕ್ಕಳು ಬೆದರಿದರು. ರಸ್ತೆಯಲ್ಲಿ ಮಣ್ಣಿನ ಸುವಾಸನೆ ಮೂಗಿಗೆ ಅಡರಿ ಹೃನ್ಮಸುಗಳನ್ನು ಪುಳಕಗೊಳಿಸಿತು.

ADVERTISEMENT

ಸದ್ಯ ಬಿದ್ದಿರುವ ಮಳೆಯು ಬತ್ತಿರುವ ಸಣ್ಣ ಹಳ್ಳಗಳಲ್ಲಿ ಒಂದಿಷ್ಟು ನೀರು ಸೇರುವಂತೆ ಮಾಡಿದೆ. ಕೆಲವೆಡೆ ಬತ್ತುತ್ತಿರುವ ಕೆರೆಗಳಿಗೆ ಜೀವ ಒದಗಿಸಿದೆ. ದನಕರುಗಳಿಗೆ ಮೇವಿನ ಸಮಸ್ಯೆ ನೀಗಿಸಿದೆ.

ಮತ್ತೆ ಇದೇ ರೀತಿ ಒಂದೆರಡು ದಿನಗಳವರೆಗೆ ಮಳೆ ಮುಂದುವರಿದರೆ ಬರದ ಬೇಗೆ ನಿಜಕ್ಕೂ ಪರಿಹಾರವಾಗಲಿದೆ ಎಂದು ರೈತರು ಹೇಳಿದ್ದಾರೆ.‌

ಕೆಲವೆಡೆ ಹಾನಿ:

ಕಾಳಿದಾಸರಸ್ತೆಯಲ್ಲಿ ತೆಂಗಿನಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿ ಉರಿಯಿತು. ಅಗ್ನಿಶಾಮಕಪಡೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ನಂದಿಸಿದರು. ಅಗ್ರಹಾರದ ಶಂಕರಮಠದ ಬಳಿ ದೊಡ್ಡಮಾವಿನಮರ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.