ಮೈಸೂರು: ಮುಂಗಾರು ಮಳೆ ಭಾನುವಾರ ಬಿಟ್ಟು ಬಿಟ್ಟು ಬರುವ ಮೂಲಕ ನಗರದ ವಾತಾವರಣವನ್ನು ತಂಪಾಗಿಸಿತು. ಮಧ್ಯಾಹ್ನದ ನಂತರ ಆರಂಭವಾದ ಜಿಟಿಜಿಟಿ ಮಳೆ ಒಮ್ಮೊಮ್ಮೆ ಬಿರುಸು ಪಡೆಯುತ್ತಿತ್ತು. ರಜೆ ದಿನವಾದ ಭಾನುವಾರ ಹೊರಗಡೆ ಸುತ್ತಾಡುವ ಬಹುಜನರ ಕನಸಿಗೆ ತಣ್ಣೀರೆರಚಿತು.
ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಪ್ರಖರವಾದ ಬಿಸಿಲು ಬರಲಿಲ್ಲ. ಬೀಳುತ್ತಿರುವ ಮಳೆಯು ಹಲವು ಬೆಳೆಗಳಿಗೆ ಸಹಕಾರಿ ಎನಿಸಿದೆ.
ಅತ್ಯಧಿಕ ಮಳೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ 2 ಸೆಂ.ಮೀನಷ್ಟು ಬಿದ್ದಿದೆ. ಶನಿವಾರ ಇದೇ ತಾಲ್ಲೂಕಿನ ನೇರಳೆಯಲ್ಲಿ 3 ಸೆಂ.ಮೀನಷ್ಟು ಮಳೆಯಾಗಿತ್ತು.
ಮೈಸೂರು ತಾಲ್ಲೂಕಿನ ಬೆಳವಾಡಿ, ಬೋಗಾದಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದೂವರೆ ಸೆಂ.ಮೀ, ಮೈಸೂರು ನಗರದಲ್ಲಿ 1.3 ಸೆಂ.ಮೀನಷ್ಟು ಮಳೆಯಾಗಿದೆ.
ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಎಚ್.ಡಿ.ಕೋಟೆ, ತಿ.ನರಸೀಪುರ ತಾಲ್ಲೂಕಿನ ಹಲವೆಡೆ ಹಗುರ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.