ADVERTISEMENT

ನಿಲ್ಲದ ಭರಣಿ ಮಳೆ ಅಬ್ಬರ: ಅಪಾರ ಹಾನಿ

ರಾಜ್ಯದ ವಿವಿಧೆಡೆ ಭಾರಿ ಮಳೆ; ಅಪಾರ ಹಾನಿ– ಮೈಸೂರು ಜಿಲ್ಲೆಯಾದ್ಯಂತ ಉರುಳಿಬಿದ್ದ ವಿದ್ಯುತ್‌ ಕಂಬ, ಮರ

​ಪ್ರಜಾವಾಣಿ ವಾರ್ತೆ
Published 2 ಮೇ 2022, 3:58 IST
Last Updated 2 ಮೇ 2022, 3:58 IST
ಮೈಸೂರಿನ ಚಾಮರಾಜಜೋಡಿ ರಸ್ತೆಯಲ್ಲಿ ಶನಿವಾರ ತಡರಾತ್ರಿ ಉರುಳಿದ ಬೃಹತ್ ಗಾತ್ರದ ಮರ
ಮೈಸೂರಿನ ಚಾಮರಾಜಜೋಡಿ ರಸ್ತೆಯಲ್ಲಿ ಶನಿವಾರ ತಡರಾತ್ರಿ ಉರುಳಿದ ಬೃಹತ್ ಗಾತ್ರದ ಮರ   

ಮೈಸೂರು: ಜಿಲ್ಲೆಯಲ್ಲಿ ಭರಣಿ ಮಳೆ ಸತತ 3ನೇ ದಿನವಾದ ಭಾನುವಾರವೂ ಅಬ್ಬರಿಸಿದೆ. ಬಿರುಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಮಳೆಗೆ ಹಲವು ಮರಗಳು ಧರೆಗುರುಳಿದ್ದರೆ, ವಿದ್ಯುತ್ ಕಂಬಗಳು ಮುರಿದಿವೆ. ನಗರದಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ.

ಮೈಸೂರು ನಗರದಲ್ಲಿ 100ಕ್ಕೂ ಅಧಿಕ ಮರಗಳು ಹಾಗೂ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಚಾಮರಾಜ ಜೋಡಿ ರಸ್ತೆಯಲ್ಲಿ ಬೃಹತ್ ಮರ ಉರುಳಿ ಬಿದ್ದು ಆಟೊ ಮತ್ತು ಕಾರು ಜಖಂಗೊಂಡವು. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ ಮೇಲೆ ವಿದ್ಯುತ್‌ ಕಂಬ ಉರುಳಿದ ಪರಿಣಾಮ ಪ್ರಯಾಣಿಕರು ಬಸ್‌ನಿಂದ ಇಳಿದು ಓಡಿದರು. ಬಸ್‌ಗೆ ತಂತಿ ತಾಗದಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿ
ದ್ದಾರೆ. ಕೊಡಗು ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.

ರಾಜ್ಯದಲ್ಲೂ ಜೋರು ಮಳೆ

ADVERTISEMENT

ಬೆಂಗಳೂರು: ರಾಜ್ಯದ ಹಲವು ಕಡೆ ಭಾನುವಾರ ಗುಡು–ಸಿಡಿಲು ಸಹಿತ ಜೋರು ಮಳೆ ಸುರಿಯಿತು.

ಬೆಂಗಳೂರು ನಗರದ ಬಹುತೇಕ ಕಡೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂತು. ತಂಪಿನ ಗಾಳಿಯೂ ಬೀಸಿತ್ತು. ಸಂಜೆ ಗುಡುಗು–ಸಿಡಿಲಿನ ಅಬ್ಬರದೊಂದಿಗೆ ಜೋರು ಮಳೆ ಆಯಿತು. ಮಳೆ ಜೊತೆ ಆಲಿಕಲ್ಲುಗಳು ಬಿದ್ದಿದ್ದವು.

ಮಳೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾಕೂಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಬಿರುಗಾಳಿಗೆ ಬೃಹತ್‌ ಮರ, ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಹಲವು ತಾಸು ಸಂಚಾರ ವ್ಯತ್ಯಯವಾಗಿತ್ತು. ಬಿಡದಿಯಲ್ಲಿ ಸಿಡಿಲು ಬಡಿದು 10 ಕುರಿ ಹಾಗೂ 6 ಮೇಕೆ ಸಾವನ್ನಪ್ಪಿವೆ.

ಮೈಸೂರು ಭಾಗದಲ್ಲಿ ಮಳೆ ಮುಂದು
ವರಿದಿದ್ದು, ಭಾನುವಾರ ಸಿಡಿಲು ಬಡಿದು ಇಬ್ಬರು ಮೃತರಾಗಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ವಳಲೇಕಟ್ಟೆಕೊಪ್ಪಲಿನಲ್ಲಿ ಸಿಡಿಲು ಬಡಿದು ಮಾಸ್ತಮ್ಮ (53) ಮೃತರಾದರು. ಗ್ರಾಮದಲ್ಲಿ ಒಂದು ಹಸು ಕೂಡ ಮೃತಪಟ್ಟಿದೆ. ಚಿನಕುರಳಿ ಹಾಗೂ ಕುಂಬಾರಕೊಪ್ಪಲು ಗ್ರಾಮದ 6 ಮಂದಿ ಗಾಯಗೊಂಡಿದ್ದಾರೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಕೃಷ್ಣಪುರದಲ್ಲಿ ಸಿಡಿಲು ಬಡಿದು ರಂಗನಾಯಕ (70) ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಮರದ
ಕೆಳಗೆ ನಿಂತಿದ್ದಾಗ ಮರಕ್ಕೆ ಸಿಡಿಲು ಬಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.