ಮೈಸೂರು: ಚೈತ್ರಮಾಸದ ಶುಕ್ಲ ಪಕ್ಷದ ನವಮಿಯ ದಿನವಾದ ಶನಿವಾರ ನಗರದಲ್ಲಿ ಶ್ರದ್ಧಾಭಕ್ತಿ ಹಾಗೂಸಡಗರದಿಂದ ರಾಮನವಮಿ ಯನ್ನು ಆಚರಿಸಲಾಯಿತು.
ನಗರದ ವಿವಿಧ ಭಾಗಗಳಲ್ಲಿ ವಿವಿಧ ದೇವಸ್ಥಾನ, ಸಂಘ ಸಂಸ್ಥೆಗಳು ಹಬ್ಬಾಚರಣೆ ಮಾಡಿದವು. ಹಬ್ಬದ ಪ್ರಯುಕ್ತ ಶ್ರೀರಾಮ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಸೀತಾರಾಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪಾನಕ, ಮಜ್ಜಿಗೆ ಹಂಚಿಕೆ: ವಿವಿಧ ಸ್ಥಳೀಯ ಸಂಘಟನೆಗಳು ಪಾನಕ, ಮಜ್ಜಿಗೆ ಹಾಗೂ ಕೋಸುಂಬರಿಯನ್ನು ಹಂಚಿದವು. ಬಿಸಿಲ ಬೇಗೆಯಲ್ಲಿ ತಂಪನೆಯ ಮಜ್ಜಿಗೆ, ಪಾನಕ ಭಕ್ತರ ದಾಹ ನೀಗಿಸಿದವು.
ಅರಮನೆ ಉತ್ತರ ಬಾಗಿಲಿನ ಶ್ರೀರಾಮ ದೇವಸ್ಥಾನ, ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ, ವಿದ್ಯಾರಣ್ಯಪುರಂನ ಚಿನ್ಮಯ ಮಿಷನ್, ಕೃಷ್ಣಮೂರ್ತಿಪುರಂನ ಶ್ರೀರಾಮಂದಿರ, ಜಯಲಕ್ಷ್ಮಿಪುರಂನ ಶ್ರೀರಾಮ ಸೇವಾ ಮಂಡಳಿ ಚಾರಿಟಬಲ್ ಟ್ರಸ್ಟ್, ರಾಮಕೃಷ್ಣನಗರ ‘ಐ’ ಬ್ಲಾಕ್ನ ಗಣಪತಿ ದೇವಸ್ಥಾನ, ಮಾನಂದವಾಡಿ ರಸ್ತೆಯ ಸೀತಾರಾಮ ದೇವಸ್ಥಾನ, ಲಕ್ಷ್ಮಿ ಭಜನಾ ಮಂಡಳಿ, ನಾರಾಯಣಶಾಸ್ತ್ರಿ ರಸ್ತೆಯ ಪ್ರಸನ್ನ ಸೀತಾರಾಮ ಮಂದಿರದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ವಿಶೇಷವಾಗಿತ್ತು.
ಅಂತೆಯೇ, ಹಬ್ದದ ಅಂಗವಾಗಿ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಕಟ್ಟಿದ್ದವು. ಚೈತನ್ಯ ಭಜನಾ ಮಂಡಳಿಯಿಂದ ರಾಮಸಹಸ್ರನಾಮ, ಸುಬ್ಬರಾವ್ ತಂಡದಿಂದ ಭಜನೆ, ರಾಜಶ್ರೀ ಜೋಷಿಯಾರ್ ಶ್ರೀಕಾಂತ್, ವಿದುಷಿ ಐಶ್ವರ್ಯ ಮಣಿಕರ್ಣಿಕಾ ತಂಡದಿಂದ ದ್ವಂದ್ವ ಗಾಯನ, ಜಗದೀಶ ತಂಡದಿಂದ ನಾದಸ್ವರ, ಟಿ.ಎಸ್.ಪಟ್ಟಾಭಿರಾಮ ಪಂಡಿತ್, ಮತ್ತೂರು ಶ್ರೀನಿಧಿ, ಎಚ್.ಎಸ್.ಸುಧೀಂದ್ರ, ಜಿ.ಎಸ್.ರಾಮಾನುಜನ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.