ADVERTISEMENT

30ರಿಂದ ರಾಮನವಮಿ ಸಂಗೀತ ಸುಧೆ

ಆಲಮ್ಮನವರ ಛತ್ರದಲ್ಲಿ 133ನೇ ರಾಮೋತ್ಸವ: ಸಂಗೀತ ಸಂಭ್ರಮಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 8:50 IST
Last Updated 28 ಮಾರ್ಚ್ 2023, 8:50 IST

ಮೈಸೂರು: ನಗರದ ಶ್ರೀರಾಮಪೇಟೆಯ ‘ಶ್ರೀರಾಮಾಭ್ಯದಯ ಸಭಾ’ 133ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ರಾಮನವಮಿ ಪ್ರಯುಕ್ತ ಮಾರ್ಚ್‌ 30ರಿಂದ ಏ.8ರವರೆಗೆ ‘ಸಂಗೀತೋತ್ಸವ ಆಯೋಜಿಸಿದೆ. ಅದಕ್ಕಾಗಿ ಭರದ ಸಿದ್ಧತೆ ನಡೆದಿದೆ. ದೇಶ ವಿವಿಧೆಡೆಯ ಸಂಗೀತ ಕಲಾವಿದರು ‘ಶ್ರೀರಾಮನವಮಿ ಸಂಗೀತ ಸುಧೆ’ಯನ್ನು ಹರಿಸಲಿದ್ದಾರೆ.

ವಿನೋಬಾ ರಸ್ತೆಯ ಆಲಮ್ಮನವರ ಛತ್ರದಲ್ಲಿ ರಾಮನವಮಿ ದಿನವಾದ 30ರಂದು ಗುರುವಾರ ಸಂಜೆ 5.30ಕ್ಕೆ ಸಂಗೀತೋತ್ಸವವನ್ನು ವಿದುಷಿ ಜಯಂತಿ ಕುಮರೇಶ್‌ ಉದ್ಘಾಟಿಸಲಿದ್ದಾರೆ. ಕೈಗಾರಿಕೋದ್ಯಮಿ ಡಾ.ಎಂ.ಜಗನ್ನಾಥ ಶೆಣೈ, ಟ್ರಸ್ಟ್‌ ಅಧ್ಯಕ್ಷ ಡಾ.ಎನ್‌.ಶ್ರೀರಾಮ್‌ ಭಾಗವಹಿಸುವರು.

‘ಸಭಾವು 1890ರಲ್ಲಿ ಸ್ಥಾಪನೆ ಯಾಗಿದ್ದು, ಅಂದಿನಿಂದಲೂ ನಿರಂತರವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿದೆ. ಸಂಗೀತೋತ್ಸವವನ್ನು ಆಯೋಜಿಸುತ್ತಿದೆ. ಸಂಗೀತವು ಜೀವಕಣಗಳನ್ನು ಪುನಶ್ಚೇತನಗೊಳಿಸಿ ಆನಂದ ಹಾಗೂ ಆರೋಗ್ಯ ನೀಡುವ ಸುಧೆಯಾಗಿದೆ. ಹೀಗಾಗಿ ರಾಮನ ಸ್ಮರಣೆಯೊಂದಿಗೆ ಸಂಗೀತ ಉತ್ಸವಗಳನ್ನು ಹಮ್ಮಿಕೊಳ್ಳ ಲಾಗಿದೆ’ ಎಂದು ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ.ಎನ್‌.ಶ್ರೀರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆಲಮ್ಮನವರ ಛತ್ರದಲ್ಲಿ ನಿತ್ಯ ಸಂಜೆ 6.30ರಿಂದ 9.30ರವೆರೆಗೆ ಸಂಗೀತ ಕಛೇರಿಗಳು ನಡೆಯಲಿವೆ. ಜಯಂತಿ ಕುಮರೇಶ್‌ ಅವರ ವೀಣಾ ವಾದನ, ಪಾಲ್ಘಾಟ್‌ ರಾಮಪ್ರಸಾದ್‌ ಅವರ ಶಾಸ್ತ್ರೀಯ ಸಂಗೀತ ಗಾಯನ, ಅಶ್ವಥ್ ನಾರಾಯಣ್‌, ಪ್ರಸನ್ನ ವೆಂಕಟರಾಮನ್‌ ಗಾಯನ, ಹೇರಂಬ– ಹೇಮಂತ್‌ ಅವರ ದ್ವಂದ್ವಕೊಳಲು ವಾದನ ಸೇರಿದಂತೆ ರಸದೌತಣವೇ ಇದೆ’ ಎಂದರು.

‘ನೂರಾರು ವರ್ಷದಿಂದ ರಾಮಮಂದಿರದ ಒಳಗೆ ಸಂಗೀತ ಕಛೇರಿ ನಡೆಯುತ್ತಿತ್ತು. 2015ರಿಂದ ಆಲಮ್ಮನ ಛತ್ರದಲ್ಲಿ ಕಛೇರಿಗಳನ್ನು ಆಯೋಜಿಸಲಾಗುತ್ತಿದೆ. ಟಿ.ವಿ.ಶಂಕರನಾರಾಯಣ್, ಎಂ.ಎಸ್‌.ಶೀಲಾ, ಕಲಾವತಿ ಅವಧೂತ್, ಮಲ್ಲಾಡಿ ಸಹೋದರರು, ಓ.ಎಸ್‌.ತ್ಯಾಗರಾಜನ್‌, ಕದ್ರಿ ಗೋಪಾಲನಾಥ್‌ ಸೇರಿದಂತೆ ಹಲವರು ಕಛೇರಿ ನೀಡಿದ್ದಾರೆ’ ಎಂದು ಸ್ಮರಿಸಿದರು.

‘30ರಿಂದ 8ರವೆರೆಗೆ ನಿತ್ಯ ಸಂಜೆ 5ರಿಂದ 6ರವರೆಗೆ ರಾಮಚಂದ್ರ ಅವರು ‘ರಾಮಾಯಣ’ದ ವಾಚನ ಇರಲಿದೆ. 2ರಂದು ಬೆಳಿಗ್ಗೆ 10ರಂದು ಸೀತಾ ಕಲ್ಯಾಣ, ಸಂಜೆ 4.30ಕ್ಕೆ ವಿಷ್ಣು ಸಹಸ್ರನಾಮದ ಕುರಿತು ನಾಗರಾಜರಾವ್‌ ಮಾತನಾಡುವರು. 9ರ ಭಾನುವಾರ ಬೆಳಿಗ್ಗೆ 9.30ಕ್ಕೆ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. 10ರಂದು ವಿದುಷಿ ಅರ್ಚನಾ ಪಿ.ರಾವ್ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.