ಮೈಸೂರು: ‘ಹಿಂದುಳಿದ ವರ್ಗಗಳ ಅಭ್ಯುದಯದ ಹಿತದೃಷ್ಟಿಯಿಂದ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಯಾಗಲು ಶ್ರಮಿಸಿದ್ದ ಕೆ.ಎಚ್.ರಾಮಯ್ಯ, ಹಿಂದುಳಿದ ಮತ್ತು ಬಡಜನರ ಶೈಕ್ಷಣಿಕ ಸಬಲೀಕರಣದ ಮೂಲಕ, ಅವರ ಪಾಲಿನ ಆಶಾಕಿರಣವಾಗಿದ್ದರು‘ ಎಂದು ಪೊಲೀಸ್ ಉಪ ಆಯುಕ್ತ ಡಾ.ಎ.ಎನ್.ಪ್ರಕಾಶ್ಗೌಡ ಹೇಳಿದರು.
ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ, ನಮ್ಮೂರು-ನಮ್ಮೋರು ಸಂಘಟನೆ ವತಿಯಿಂದ ನಗರದ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸಮಾಧಿ ಬಳಿ ನಡೆದ ಹಿಂದುಳಿದ ವರ್ಗಗಳ ನೇತಾರ ಕೆ.ಎಚ್.ರಾಮಯ್ಯ ಅವರ 141ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜದ ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡಿ, ಅವರ ಏಳಿಗೆಗೆ ಪ್ರಾಮಾಣಿಕವಾಗಿ ದುಡಿದ ಕಾರಣ, ಇಂದು ಈ ವರ್ಗಗಳು ಪ್ರಗತಿ ಹೊಂದಲು ಸಾಧ್ಯವಾಗಿದೆ’ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ‘ಕೆ.ಎಚ್.ರಾಮಯ್ಯ ಸಹಕಾರ ಇಲಾಖೆಯ ರಿಜಿಸ್ಟ್ರಾರ್ ಆಗಿ, ಮೈಸೂರು ಮಹಾರಾಜ ಕುಟುಂಬಕ್ಕೆ ತುಂಬಾ ಹತ್ತಿರದವರಾಗಿ, ಎಲ್ಲಾ ಹಿಂದುಳಿದ ವರ್ಗಗಳಿಗೆ ತಮ್ಮ ಸಂಘಗಳನ್ನು ಸ್ಥಾಪಿಸಲು ಸಹಕರಿಸಿದರು. ನೋಂದಣಿ ಮಾಡಿಸಿದ್ದಲದೇ ನಿವೇಶನ ಸಹ ಕೊಡಿಸಿದರು. ಮೂಲತಃ ಒಕ್ಕಲಿಗರಾದರೂ ಸಹ, ಎಲ್ಲಾ ಹಿಂದುಳಿದ ವರ್ಗಗಳ ಬಗ್ಗೆ ಅವರ ಕಳಕಳಿ ಮತ್ತು ಸಮನ್ವಯ ದೃಷ್ಟಿ ಶ್ಲಾಘನೀಯ‘ ಎಂದರು.
ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಯುವ ಸಾಹಿತಿ ಟಿ.ಸತೀಶ್ ಜವರೇಗೌಡ, ಅರಸು ಮಹಾಸಭಾದ ಅಧ್ಯಕ್ಷ ನಂದೀಶ್ ಅರಸ್, ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್.ಎಲ್.ಯಮುನಾ, ನಮ್ಮೂರು ನಮ್ಮೋರು ಸಂಘಟನೆಯ ಇ.ಎಚ್.ಸತೀಶ್ ಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು, ನಿರ್ದೇಶಕರಾದ ರವಿ ರಾಜಕೀಯ, ಗಿರೀಶ್ ಗೌಡ, ಕುಮಾರ್ ಗೌಡ, ಮನೋರೋಗ ತಜ್ಞ ಡಾ.ಎಂ.ವಿ.ರವೀಶ್ ಗೌಡ, ಪತ್ರಿಕಾ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.