ಹುಣಸೂರು: ಸಿಜೆಐ ಮೇಲೆ ಶೂ ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಾದ್ಯಂತ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿ ಗ್ರಾಮಗಳ ಬಂದ್ಗೆ ಕರೆ ನೀಡಿದ್ದವು. ರತ್ನಾಪುರಿ ಗ್ರಾಮದಲ್ಲಿ ಗ್ರಾಮಸ್ಥರು ವ್ಯಾಪಾರ ವಹಿವಾಟು ಬಂದ್ ಮಾಡಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರತ್ನಾಪುರಿ ಪುಟ್ಟಸ್ವಾಮಿ, ‘ನ್ಯಾಯಾಲಯದ ಕಲಾಪದ ವೇಳೆ ತಮ್ಮ ಪರವಾಗಿ ಮುಖ್ಯ ನ್ಯಾಯಾಧೀಶರು ತೀರ್ಪು ನೀಡಲಿಲ್ಲ ಎಂದು ಅಸಮಾಧಾನಗೊಂಡ ವಕೀಲ ಅಸಭ್ಯವಾಗಿ ವರ್ತಿಸಿ ಮುಖ್ಯ ನ್ಯಾಯಾಧೀಶರನ್ನು ಅವಮಾನಿಸಿ ಭಾರತೀಯ ಸಂವಿಧಾನದ ಮೇಲಿನ ನೇರ ದಾಳಿ ಮಾಡಿದ್ದಾರೆ’ ಎಂದರು.
ದಸಂಸ ಮುಖಂಡ ಹರಿಹರ ಆನಂದ ಸ್ವಾಮಿ ಮಾತನಾಡಿ, ಸ್ವಾತಂತ್ರ್ಯಭಾರತದಲ್ಲಿ ಮನುಸ್ಮೃತಿ ಧೋರಣೆ ಹೊಂದಿದವರು ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸುತ್ತಿದ್ದು, ಈವರಗೆ ನ್ಯಾಯಾಲಯದ ಹೊರಗಿತ್ತು. ಈಗ ನ್ಯಾಯಾಲಯದ ಒಳಗೂ ಕಾಣಿಸಿಕೊಂಡಿರುವುದು ತಲೆ ತಗ್ಗಿಸುವ ಸಂಗತಿ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಜ್ಗರ್ ಪಾಶಾ, ಡಿ.ಕೆ.ಕುನ್ನೇಗೌಡ, ಬಿ.ವೈ.ಪ್ರಸನ್ನ, ನಾಗೇಶ್ ಮೆಂಗಣಿ, ಮೂಜಿಬ್, ಸರ್ವಣ್ಣ, ವಿಜೇಂದ್ರ ಕುಮಾರ್, ಸುದರ್ಶನ್ ಸಿಂಗ್, ಗೌತಮ್, ದಿನೇಶ್, ಪ್ರಜ್ವಲ್, ಗಾರೆ ಸುರೇಶ್ ಸೇರಿದಂತೆ ಗ್ರಾಮಸ್ಥರು ಇದ್ದರು.
ಪ್ರತಿಭಟನೆ: ನಗರದ ಸಂವಿಧಾನ ವೃತ್ತದಲ್ಲಿ ದಸಂಸ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಸಿಜೆಐ ಮೇಲೆ ನಡೆದಿರುವ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಜೆ. ಮಹದೇವ್ ಮಾತನಾಡಿ, ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ವಕೀಲರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೊಳಗಟ್ಟ ಕೃಷ್ಣ, ಡೇವಿಡ್, ವರದರಾಜು ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.