ADVERTISEMENT

ಖಾಸಗಿ ಆಸ್ಪತ್ರೆಗಳ ಜನಪ್ರತಿನಿಧಿಗಳ ಆಯ್ಕೆ ಸರಿಯೇ ಓದುಗರ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 8:13 IST
Last Updated 6 ಆಗಸ್ಟ್ 2020, 8:13 IST
ಶಂಕರೇಗೌಡ
ಶಂಕರೇಗೌಡ   

ಜನಪ್ರತಿನಿಧಿಗಳು ‘ಕೋವಿಡ್ 19’ ದೃಢಪಟ್ಟಾಗ ಖಾಸಗಿ ಆಸ್ಪತ್ರೆಗಳನ್ನು ಆಯ್ಕೆ ಮಾಡಿದ್ದು ಸರಿಯಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗಿ ಅದರ ಬದಲಾವಣೆಗೆ ಪ್ರಯತ್ನಿಸಲು ಅವಕಾಶ ಇತ್ತು. ಇವರಿಗೆ ತಮ್ಮ ಜೀವದ ಬೆಲೆ ಏನು ಎಂದು ಗೊತ್ತು. ಈಗ ನಮಗೆ ಇವರು ಸಾಮಾನ್ಯ ಜನರ ಜೀವಗಳಿಗೆ ಕೊಡುವ ಬೆಲೆ ಏನು ಎಂಬುದು ಅರ್ಥವಾಗುತ್ತದೆ. ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇರುವುದಿಲ್ಲ ಎಂಬುದನ್ನು ಜನಪ್ರತಿನಿಧಿಗಳು ದೃಢೀಕರಿಸಿದ್ದಾರೆ.

–ಶಂಕರೇಗೌಡ, ನಿವೃತ್ತ ಸಹಪ್ರಾಧ್ಯಾಪಕ, ಕುವೆಂಪುನಗರ

ಸರ್ಕಾರಿ ಆಸ್ಪತ್ರೆಯಲ್ಲಿ ನೀಡುವ ಸೌಲಭ್ಯ ಕಳಪೆಯಾಗಿರುತ್ತದೆ ಎಂದು ಜನ ನಾಯಕರೆ ತೋರಿಸಿಕೊಟ್ಟಂತಾಗಿದೆ. ಜನ ನಾಯಕರಾದವರು ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಿದರೆ ಇನ್ನೂ ಜನಸಾಮಾನ್ಯರು ಹೇಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ? ಇದರಲ್ಲೇ ಗೊತ್ತಾಗುತ್ತದೆ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಯ ಸೌಲಭ್ಯಗಳಲ್ಲಿ ಹೇಗೆ ಭಿನ್ನವಾಗಿವೆ ಎಂದು.

ADVERTISEMENT

–ಮೇಘರಾಜ್ ಕಬ್ಬಳ್ಳಿ, ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗ, ಮಾನಸಗಂಗೋತ್ರಿ

ರಾಜಕಾರಣಿಗಳು ತಾವು ಅನಾರೋಗ್ಯಕ್ಕೀಡಾದಾಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬುದನ್ನು ಇವರೆ ಒಪ್ಪಿಕೊಂಡಂತಾಯಿತಲ್ಲವೇ? ನರ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಅಭಿವೃದ್ಧಿಪಡಿಸಿದ್ದೇವೆಂದು ಬೀಗುವ ಇವರಿಗೇ ಅವುಗಳ ಗುಣಮಟ್ಟದ ಮೇಲೆ ನಂಬಿಕೆ ಇಲ್ಲವೇ? ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ?

–ಸಾಗರ್, ತಾಯೂರು

ಆಸ್ಪತ್ರೆ ಸೇರುವ ಆಯ್ಕೆ ವೈಯಕ್ತಿಕ ವಿಚಾರವಾದರೂ, ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳನ್ನು ಅನುಸರಿಸುವ ಎಷ್ಟೋ ಮಂದಿಗೆ ಮತ್ತು ಅವರನ್ನು ಆಯ್ಕೆ ಮಾಡಿದ ಮತದಾರರಿಗೆ ಸರ್ಕಾರಿ ಆಸ್ಪತ್ರೆಗಳ ಬಗೆಗಿನ ಅಪನಂಬಿಕೆ ದೂರ ಮಾಡುವುದಕ್ಕಾದರೂ, ಕೊರೊನಾ ಪಾಸಿಟಿವ್ ಬಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಸೇರುವುದೇ ಸೂಕ್ತ. ನೆನಪಿಡಿ, ಬಹುಪಾಲು ಕೊರೊನಾ ಸೋಂಕಿತರನ್ನು ಕಾಪಾಡಿದ, ಆರೈಕೆ ಮಾಡಿದ ದೊಡ್ಡ ಕೀರ್ತಿ ಸರ್ಕಾರಿ ವೈದ್ಯರಿಗೇ ಸಲ್ಲುತ್ತದೆ.

–ಸಂದೀಪ್ ಎಸ್. ರಾವಣಿಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.