ADVERTISEMENT

ಪೌರಕಾರ್ಮಿಕರ ಮೇಲುಸ್ತುವಾರಿ ಹುದ್ದೆಯಲ್ಲೇ ಮುಂದುವರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 9:14 IST
Last Updated 6 ಅಕ್ಟೋಬರ್ 2021, 9:14 IST
ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌.ಮುರುಗೇಶ್‌, ಎಂ.ವಿ.ವೆಂಕಟೇಶ್‌, ಜಿ.ಮುರುಗೇಶ್‌ ಇದ್ದರು
ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌.ಮುರುಗೇಶ್‌, ಎಂ.ವಿ.ವೆಂಕಟೇಶ್‌, ಜಿ.ಮುರುಗೇಶ್‌ ಇದ್ದರು   

ಮೈಸೂರು: ‘ಪೌರಕಾರ್ಮಿಕರ ಮೇಲುಸ್ತುವಾರಿಗಳಾಗಿ ಕೆಲಸ ಮಾಡುತ್ತಿರುವವರನ್ನು ಅದೇ ಹುದ್ದೆಯಲ್ಲೇ ಮುಂದುವರಿಸಬೇಕು’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಮೇಲುಸ್ತುವಾರಿ ಸಮಿತಿ ಸದಸ್ಯ ಎಂ.ವಿ.ವೆಂಕಟೇಶ್‌ ಆಗ್ರಹಿಸಿದರು.

‘ವೇತನ ನೇರ ಪಾವತಿ ಪದ್ಧತಿ ಜಾರಿಗೊಳಿಸಿದ ಬಳಿಕ, ಮೇಲುಸ್ತುವಾರಿಗಳಾದ್ದವರನ್ನು ಪೌರಕಾರ್ಮಿಕರಾಗಿ ಕೆಲಸ ಮಾಡುವಂತೆ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮೈಸೂರು ನಗರದಲ್ಲಿ 125 ಮಂದಿಮೇಲುಸ್ತುವಾರಿಗಳು ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ಮಾದರಿಯಲ್ಲಿ ಮೇಲುಸ್ತುವಾರಿ ಹುದ್ದೆಯಲ್ಲೇ ಮುಂದುವರಿಸಿ ಭತ್ಯೆ ನೀಡಬೇಕು. ಇಲ್ಲದಿದ್ದರೆ ದಸರಾ ಮಹೋತ್ಸವ ಬಹಿಷ್ಕರಿಸಬೇಕಾಗುತ್ತದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಪೌರಕಾರ್ಮಿಕರಿಗೆ ತೊಂದರೆ ನೀಡಬಾರದು. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ಗಳ ಸರ್ವೆ ನಡೆಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಪೌರಕಾರ್ಮಿಕರಾಗಿ ನೇಮಕಗೊಳ್ಳುವವರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಿರುವುದು ಸರಿಯಲ್ಲ. ಈ ನಿಯಮವನ್ನು ರದ್ದುಪಡಿಸಬೇಕು. ಗುತ್ತಿಗೆ ಪೌರಕಾರ್ಮಿಕರು ಹಾಗೂ ಮೇಲುಸ್ತುವಾರಿಗಳನ್ನು ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್‌ ಸ್ಕ್ಯಾವೆಂಜರ್‌ ಜಾಗೃತಿ ಸಮಿತಿ ಸದಸ್ಯ ಜಿ.ಮುರುಗೇಶ್‌, ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಸಂಘದ ಕಾರ್ಯದರ್ಶಿ ಆರ್‌.ಮುರುಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.