ADVERTISEMENT

ಮೈಸೂರು: ನಿವೃತ್ತ ಪ್ರಾಧ್ಯಾಪಕರ ಕೊಲೆ; ಆತಂಕ

ಚಾಕುವಿನಿಂದ ಇರಿದು ಪರಾರಿಯಾದ ಇಬ್ಬರು ಹಂತಕರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:06 IST
Last Updated 21 ಸೆಪ್ಟೆಂಬರ್ 2020, 1:06 IST

ಮೈಸೂರು: ಇಲ್ಲಿನ ನಿವೇದಿತಾನಗರದ ನಿವಾಸಿ ನಿವೃತ್ತ ಪ್ರಾಧ್ಯಾಪಕ ಪರಶಿವಮೂರ್ತಿ (67) ಅವರನ್ನು ಅವರ ನಿವಾಸದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಭಾನುವಾರ ರಾತ್ರಿ 7.45ರ ಸುಮಾರಿಗೆ ಕರೆಗಂಟೆ ಒತ್ತಿದ ಇಬ್ಬರು ಹಂತಕರು, ಪರಶಿವಮೂರ್ತಿ ಬಾಗಿಲು ತೆರೆಯುತ್ತಿದ್ದಂತೆ ಅವರಿಗೆ ಇರಿದಿದ್ದಾರೆ. ಎದೆ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಿಗೆ ಮನಸೋ ಇಚ್ಛೆ ಚುಚ್ಚಿ ಹೊರಟಿದ್ದಾರೆ. ತೀವ್ರ ರಕ್ತಸ್ರಾವದೊಂದಿಗೆ ಮನೆಯ ಹಾಲ್‌ಗೆ ಬಂದ ಇವರು ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇರಿತಕ್ಕೆ ಒಳಗಾದ ತಕ್ಷಣ ಇವರು ಕೂಗಿದ ಶಬ್ದ ಕೇಳಿ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ವೇಳೆ ಇವರೊಬ್ಬರೇ ಮನೆಯಲ್ಲಿದ್ದರು. ಘಟನೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ಇಬ್ಬರು ಹಂತಕರು ಬಂದಿರುವುದು ಗೋಚರಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಡಿಸಿಪಿ ಡಾ.ಪ್ರಕಾಶ್‌ಗೌಡ, ಗೀತಾ ಪ್ರಸನ್ನ, ಎಸಿಪಿಗಳಾದ ಪೂರ್ಣಚಂದ್ರ, ಮರಿಯಪ್ಪ, ಇನ್‌ಸ್ಪೆಕ್ಟರ್‌ಗಳಾದ ವಿಜಯಕುಮಾರ್, ರಾಜು, ಪಿಎಸ್‌ಐ ಭವ್ಯಾ ಸೇರಿದಂತೆ ಹಲವು ಅಧಿಕಾರಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.

ಘಟನೆಯಿಂದ ಬಡಾವಣೆಯ ಜನರು ಆತಂಕಗೊಂಡಿದ್ದಾರೆ. ಘಟನೆಗೆ ಹಳೆಯ ವೈಷಮ್ಯ ಕಾರಣವಿರಬಹುದು ಎಂದು ಊಹಿಸಲಾಗಿದೆ.

ಕುವೆಂಪುನಗರದ ಪದವಿಪೂರ್ವ ಕಾಲೇಜು, ಚಳ್ಳೇಕೆರೆ, ನಂಜನಗೂಡು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದ ಇವರು ಹಾಸನದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಇವರು ಪತ್ನಿ ತಮ್ಮ 8 ವರ್ಷದ ದತ್ತುಪುತ್ರನಿಂದ ಪ್ರತ್ಯೇಕವಾಗಿ ಕುವೆಂಪುನಗರದಲ್ಲಿ ವಾಸವಿದ್ದರು. ಪರಶಿವಮೂರ್ತಿ ಬಡ್ಡಿ ವ್ಯವಹಾರ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಸ್ತಿ ವ್ಯವಹಾರದ ಕುರಿತೂ ತಕರಾರುಗಳು ಇದ್ದವು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.