ADVERTISEMENT

3 ತಿಂಗಳಾದರೂ ಮುಗಿಯದ ಕಾಮಗಾರಿ

ಬೆಟ್ಟದಪುರ –ಕುಶಾಲನಗರ ಮುಖ್ಯರಸ್ತೆಯಲ್ಲಿ ದೂಳಿನದ್ದೇ ಕಾರುಬಾರು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 17:42 IST
Last Updated 14 ಡಿಸೆಂಬರ್ 2018, 17:42 IST
ಸುಂಕದಹಳ್ಳಿ ಬಳಿ ನಿರ್ಮಿಸುತ್ತಿರುವ ಡೆಕ್ ಬಳಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಸುಂಕದಹಳ್ಳಿ ಬಳಿ ನಿರ್ಮಿಸುತ್ತಿರುವ ಡೆಕ್ ಬಳಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.   

ಬೆಟ್ಟದಪುರ:‌ 3 ತಿಂಗಳ ಹಿಂದೆಯೇ ಆರಂಭಗೊಂಡ ಕುಶಾಲನಗರ–ಬೆಟ್ಟದಪುರ ಮುಖ್ಯರಸ್ತೆ ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ತೊಡಕು ಉಂಟಾಗಿದೆ.

ಕೊಡಗು-ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಚಿಕ್ಕನೇರಳೆ ಗ್ರಾಮದಿಂದ ಬಿಳಗುಂದ ಗೇಟ್ ವರೆಗೂ ಸುಮಾರು 8 ಕಿ.ಮೀ ರಸ್ತೆಯಲ್ಲಿ ಜಲ್ಲಿಕಲ್ಲು ಅರೆದು ಹಾಗೇ ಬಿಡಲಾಗಿದೆ. ಇದರಿಂದ ದ್ವಿಚಕ್ರ ವಾಹನಗಳನ್ನು ಓಡಿಸುವುದು ಸಾಹಸವೇ ಆಗಿದೆ. ಅಲ್ಲದೇ, ಇಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ಇದರಿಂದಾಗಿ, ಈ ರಸ್ತೆ ಹಾದುಹೋಗಿರುವ ಗ್ರಾಮಗಳಾದ ಸಂತೆಮಾಳ, ಕೋಳಿಮನೆ ಹಾಗೂ ಆನಂದನಗರ ಸಂಪೂರ್ಣ ದೂಳಿನಿಂದ ಆವೃತ್ತವಾಗಿದೆ.

ADVERTISEMENT

ಬಿಳಗುಂದ ಗೇಟ್‌ನಿಂದ ಆವರ್ತಿ ಗ್ರಾಮದವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನೂರಾರು ಗುಂಡಿಗಳಾಗಿವೆ. ಬೆಣಗಾಲು ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿಯೇ ದೊಡ್ಡ ಹೊಂಡಗಳಾಗಿದ್ದು, ವಾಹನಗಳು ರಸ್ತೆ ಅಂಚಿನಲ್ಲಿ ಸಂಚರಿಸುತ್ತಿರುವದರಿಂದ ಪಾದಾಚಾರಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಂಕದಹಳ್ಳಿ ಗ್ರಾಮದ ಮಹಿಳೆ ಹೇಮಾವತಿ ಮಾತನಾಡಿ ‘ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ದೂಳು ಹೆಚ್ಚಾಗಿದೆ. ಇದರಿಂದ ನವಜಾತ ಶಿಶುಗಳಿಗೆ, ಬಾಣಂತಿಯರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಅಗತ್ಯಕ್ರಮ ಕೈಗೊಂಡು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಣಗಾಲು ಗ್ರಾಮದಲ್ಲಿ ರಸ್ತೆ ಮಧ್ಯದಲ್ಲಿಯೇ ಹಲವಾರು ಗುಂಡಿಗಳಾಗಿದ್ದು, ಅನೇಕ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ಭಾಗದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಭಾರಿ ಗಾತ್ರದ ವಾಹನಗಳು ಸಂಚರಿಸುವುದರಿಂದ ರಸ್ತೆ ಮತ್ತಷ್ಟು ಹಾನಿಯಾಗುತ್ತಿದೆ ಎಂದು ಗ್ರಾಮಸ್ಥ ಈರಾಜು ಬೇಸರ ವ್ಯಕ್ತ ಪಡಿಸಿದರು.

ರಸ್ತೆ ಕಾಮಗಾರಿ ವಿಳಂಬದಿಂದ ವಾಹನ ಸಂಚಾರಕ್ಕೆ ಉಂಟಾಗುತ್ತಿರುವ ಜೊತೆಗೆ, ಧೂಳಿನಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಆದ್ದರಿಂದ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಗಮನಹರಿಸಬೇಕು ಎಂದು ಲೋಕೇಶ್, ಮಂಜಮ್ಮ, ರಮೇಶ್, ಹೇಮಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

*
ಗ್ರಾಮದಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದ್ದು ನವಜಾತ ಶಿಶುಗಳು ಮತ್ತು ಬಾಣಂತಿಯರಿಗೆ ಸಮಸ್ಯೆಯಾಗುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು.
-ಹೇಮಾವತಿ,ಸುಂಕದಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.