ಮೈಸೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಆದೇಶವನ್ನು ಪೊಲೀಸರು ಮೈಸೂರು ನಗರದಲ್ಲೂ ಮಂಗಳವಾರದಿಂದ ಜಾರಿಗೆ ತರಲು ನಿರ್ಧರಿಸಿದ್ದಾರೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆಗೆ ಸವಾರರು ದುಬಾರಿ ದಂಡ ತೆರಬೇಕಿದೆ.
ವಾಹನ ನಿಲುಗಡೆಗೆ ಅವಕಾಶ ಇಲ್ಲದ ಸ್ಥಳಗಳಲ್ಲಿ ನಿಲುಗಡೆ ಮಾಡಿದರೆ, ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗುವಂತೆ ವಾಹನ ನಿಲ್ಲಿಸಿದರೆ ಹಾಗೂ ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಮಾಡಿದರೆ ಈ ಮೊದಲು ₹ 100 ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ₹ 1,000 ದಂಡ ವಿಧಿಸಲಾಗುತ್ತದೆ.
ವೇಗ ಮಿತಿ ಉಲ್ಲಂಘನೆ ಮಾಡಿದ್ದಲ್ಲಿ ಇದುವರೆಗೂ ₹ 300 ದಂಡ ತೆರಬೇಕಿತ್ತು. ಆದರೆ, ಈಗ ₹ 500ರಿಂದ ₹ 1 ಸಾವಿರ ದಂಡ ಪಾವತಿಸಬೇಕಿದೆ.
ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿದರೆ, ಚಾಲನೆ ವೇಳೆ ಮೊಬೈಲ್ ಬಳಸಿದರೆ, ವಾಹನದ ಎರಡೂ ಪಾರ್ಶ್ವಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಸರಕುಗಳನ್ನು ಹೊರಚಾಚಿಕೊಂಡು ಸಾಗಣೆ ಮಾಡಿದರೆ ₹ 100, ಎರಡನೇ ಬಾರಿಯೂ ಇದೇ ತಪ್ಪು ಮಾಡಿದರೆ ₹ 300 ದಂಡ ವಿಧಿಸಲಾಗುತ್ತಿತ್ತು. ಕ್ರಮವಾಗಿ ಇದನ್ನು ₹ 1 ಸಾವಿರ ಹಾಗೂ ₹ 2 ಸಾವಿರಕ್ಕೆ ಹೆಚ್ಚಿಸಲಾಗಿದೆ.
ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ₹ 500 ಇದ್ದ ದಂಡವು ₹ 1 ಸಾವಿರಕ್ಕೆ ಹೆಚ್ಚಳಗೊಂಡಿದೆ.
‘ಸರ್ಕಾರದ ಆದೇಶವನ್ನು ಪಾಲನೆ ಮಾಡಲೇಬೇಕಿರುವುದರಿಂದ ದುಬಾರಿ ದಂಡ ವಿಧಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ಈ ದುಬಾರಿ ದಂಡದಿಂದ ಪಾರಾಗಬಹುದು’ ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.