ಮೈಸೂರು: ಹಿಂದಿನ ವರ್ಷ ಕಾಳ್ಗಿಚ್ಚಿಗೆ ನಾಗರಹೊಳೆ, ಬಂಡೀಪುರ ಅಭಯಾರಣ್ಯದ 20 ಸಾವಿರ ಹೆಕ್ಟೇರ್ ಬಲಿಯಾಯ್ತು. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಸೇನಾ ಹೆಲಿಕಾಪ್ಟರ್ ಅನ್ನು ಮೈಸೂರಿನ ನೆಲೆಗೆ ಒದಗಿಸುವಂತೆ ಕೇಂದ್ರದ ರಕ್ಷಣಾ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಅಸ್ಸಾಂನ ಪಶ್ಚಿಮ ಹೂಲಕ್ ಗಿಬ್ಬನ್ ವಾನರ ಪ್ರಭೇದದ ಜೋಡಿಯನ್ನು ಬುಧವಾರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿ ಮಾತನಾಡಿದ ಅವರು, ‘ರಸ್ತೆ ಬದಿಯಿಂದ 10 ಮೀಟರ್ ದೂರದವರೆಗಿನ ಹುಲ್ಲನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಸುಟ್ಟು ಹಾಕಿ, ಬೆಂಕಿ ರೇಖೆ ನಿರ್ಮಿಸುವಂತೆ ಸೂಚಿಸಲಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ನಡೆದಿದೆ’ ಎಂದು ಹೇಳಿದರು.
‘ಮೈಸೂರು ಮೃಗಾಲಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಜತೆಯಲ್ಲೇ, ಜನಾಕರ್ಷಣೆಯ ತಾಣವನ್ನಾಗಿಸಲು ಶ್ರಮಿಸಲಾಗುವುದು. ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಯಡಿಯೂರಪ್ಪ ಅವರನ್ನು ನಾನು, ಶಾಸಕ ಎಸ್.ಎ.ರಾಮದಾಸ್ ಕೋರುತ್ತೇವೆ’ ಎಂದು ತಿಳಿಸಿದರು.
ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಮೃಗಾಲಯ ಅಭಿವೃದ್ಧಿ ನನ್ನ ಕನಸು. ರೇಸ್ಕೋರ್ಸ್ ಸ್ಥಳವನ್ನು ಮುಂದಿನ 30 ವರ್ಷಕ್ಕೆ ಬಾಡಿಗೆಗೆ ಕೊಡಲಾಗಿದೆ. ಸರ್ಕಾರ ಯಾವಾಗ ಬೇಕಾದರೂ ಇದನ್ನು ರದ್ದುಗೊಳಿಸುವ ಅಧಿಕಾರ ಹೊಂದಿದೆ. ಅಗತ್ಯಬಿದ್ದರೆ ಮೃಗಾಲಯದ ಮುಂಭಾಗ ಎರಡು ಎಕರೆಯಲ್ಲಿ ವಾಹನ ನಿಲುಗಡೆ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಲಿದೆ’ ಎಂದು ತಿಳಿಸಿದರು.
ಹೊಸ ಅತಿಥಿ: ಹೊಸ ವರ್ಷಾಚರಣೆ ಅಂಗವಾಗಿ ಮೃಗಾಲಯಕ್ಕೆ ಭೇಟಿ ನೀಡಿದವರಿಗೆ ಅಸ್ಸಾಂನ ಹೂಲಕ್ ಗಿಬ್ಬನ್ ಪ್ರಾಣಿಗಳು ಮನರಂಜನೆ ನೀಡಿದವು. ಇವುಗಳಿಗೆ ಮುನ್ನಿ, ದೀಪು ಎಂದು ಹೆಸರಿಡಲಾಗಿದೆ. ಮೊದಲ ದಿನವೇ ತುಂಟಾಟದ ಮೂಲಕ ಜನರ ಗಮನ ಸೆಳೆದವು.
ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಡಿಸಿಎಫ್ ಅಲೆಕ್ಸಾಂಡರ್, ಕೆ.ಸಿ.ಪ್ರಶಾಂತ್ಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.