ಮೈಸೂರು: ತನ್ನಲ್ಲಿ ಟ್ಯೂಷನ್ಗೆ ಬರುತ್ತಿದ್ದ 14 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲೆಯೊಂದರ ಮುಖ್ಯ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯು ಈಚೆಗೆ ತನ್ನ ಸಂಬಂಧಿಕರೊಬ್ಬರ ಬಳಿ ತಾನು 2 ವರ್ಷದ ಹಿಂದೆ ಅನುಭವಿಸಿದ ಲೈಂಗಿಕ ಕಿರುಕುಳದ ಘಟನೆಯನ್ನು ಆಕಸ್ಮಿಕವಾಗಿ ಹೇಳಿದ್ದಾಳೆ. ಇದೇ ರೀತಿಯ ಕಿರುಕುಳವನ್ನು ಅನೇಕ ವಿದ್ಯಾರ್ಥಿನಿಗೂ ಶಿಕ್ಷಕ ನೀಡಿದ್ದ ಎಂದು ತಿಳಿಸಿದ್ದಾಳೆ. ತಕ್ಷಣವೇ ಸಂಬಂಧಿಕರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಫೋಕ್ಸೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಮೈಸೂರು: ಇಲ್ಲಿನ ಕೂರ್ಗಳ್ಳಿ ನಿವಾಸಿ ಕಿರಣ್ (30) ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದ್ಯವ್ಯಸನಿಯಾಗಿದ್ದ ಇವರು ಕುಟುಂಬದ ಸದಸ್ಯರೊಂದಿಗೆ ಜಗಳವಾಡುತ್ತಿದ್ದರು. ಖಿನ್ನತೆಗೆ ಜಾರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಪ್ರಕಾಶ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.
ಬೈಕಿನಿಂದ ಬಿದ್ದು ಯುವಕ ಸಾವು
ಮೈಸೂರು: ತಾಲ್ಲೂಕಿನ ಹಲಗಯ್ಯನಹುಂಡಿ ನಿವಾಸಿ ಮಾಣಿಕ್ಯರಾಜು (18) ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಬಿದ್ದು ಮೃತಪಟ್ಟಿದ್ದಾರೆ.
ಇವರು ತಮ್ಮ ಗ್ರಾಮದಲ್ಲೇ ಬೈಕ್ ಚಾಲನೆ ಮಾಡುತ್ತಿರುವಾಗ ಅಡ್ಡವಾಗಿ ಸಿಕ್ಕಿದ ಕಲ್ಲೊಂದರ ಮೇಲೆ ಬೈಕ್ನ್ನು ಹತ್ತಿಸಿದ್ದಾರೆ. ಇದರಿಂದ ಆಯತಪ್ಪಿದ ಇವರು ಕೆಳಗೆ ಬಿದ್ದು, ಕಿವಿಯ ಸಮೀಪ ಪೆಟ್ಟಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.