ADVERTISEMENT

ಶೌಚಾಲಯ ಜಾಗೃತಿ ಮೂಡಿಸಿದ ಶಾಲಾ ಮಕ್ಕಳು

ಎಂ.ಪ್ರಕಾಶ್
Published 7 ಡಿಸೆಂಬರ್ 2018, 17:15 IST
Last Updated 7 ಡಿಸೆಂಬರ್ 2018, 17:15 IST
ನಂಜನಗೂಡಿನ ಹಳ್ಳದಕೇರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಶೌಚಾಲಯ ಬಯಲು ಬಹಿರ್ದೆಸೆ ಮುಕ್ತ ನಗರ ಹಾಗೂ ಶೌಚಾಲಯಗಳ ಕಡ್ಡಾಯ ಬಳಕೆಯ ಬಗ್ಗೆ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಿದರು
ನಂಜನಗೂಡಿನ ಹಳ್ಳದಕೇರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಶೌಚಾಲಯ ಬಯಲು ಬಹಿರ್ದೆಸೆ ಮುಕ್ತ ನಗರ ಹಾಗೂ ಶೌಚಾಲಯಗಳ ಕಡ್ಡಾಯ ಬಳಕೆಯ ಬಗ್ಗೆ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಿದರು   

ನಂಜನಗೂಡು: ಶಾಲಾ ಮಕ್ಕಳು ತರಗತಿಯೊಳಗೆ ಕುಳಿತು ಪಾಠ ಕೇಳಲು, ಅಂಗಳದಲ್ಲಿ ಆಟವಾಡಲು ಮಾತ್ರ ಸೀಮಿತ ಎಂದೇನಿಲ್ಲ. ಇಲ್ಲಿ ಶಾಲಾ ಮಕ್ಕಳು ಅರಿವು, ಜಾಗೃತಿಗೂ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ನಗರದ ಹಳ್ಳದಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸ್ವಚ್ಛತೆಯ ಅರಿವು ಹಾಗೂ ಶೌಚಾಲಯಗಳ ಕಡ್ಡಾಯ ಬಳಕೆಯ ಬಗ್ಗೆ ಅರಿವು ಮೂಡಿಸಲು ಮುಂದಾದರು. ಇಲ್ಲಿನ ಅಗಸ್ತ್ಯ ಫೌಂಡೇಷನ್ ನೆರವಿನೊಂದಿಗೆ ಜಾಗೃತಿ ಜಾಥಾ ನಡೆಸಿ ಜನರಿಗೆ ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.

ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದ ನಂತರ ನಗರದ ಪ್ರಮುಖ ಬಡಾವಣೆಗಳಲ್ಲಿ ಜನರಿಗೆ ಬಯಲು ಬಹಿರ್ದೆಸೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಿಳಿ ಹೇಳಲು ಮೆರವಣಿಗೆ ನಡೆಸಿದರು. ಸಾಂಕ್ರಾಮಿಕ ರೋಗ, ಅತಿಸಾರದ ಬಗ್ಗೆ ತಿಳಿವಳಿಕೆ ನೀಡಿ, ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಾರಿದರು. ನೀರು ಮಲಿನವಾದರೆ ಸೊಳ್ಳೆಗಳು ಹೆಚ್ಚಿ ಮಲೇರಿಯಾ, ಚಿಕೂನ್‌ ಗುನ್ಯದಂತಹ ರೋಗಗಳು ಹರಡುವ ಬಗ್ಗೆ ಜನರಿಗೆ ಅರಿವು ಮೂಡಿಸಿದರು.

ADVERTISEMENT

ಬಡಾವಣೆಗಳಲ್ಲಿ ನಗರವನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡಲು ಸಮಾಜದ ಎಲ್ಲರೂ ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯಗಳ ಬಳಕೆ ಮಾಡಬೇಕು. ನೀರಿನ ಮೂಲಗಳನ್ನು ಮಾಲಿನ್ಯದಿಂದ ರಕ್ಷಿಸಬೇಕು ಎಂಬ ಸಂದೇಶಗಳುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಘೋಷಣೆ ಕೂಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಶಿಕ್ಷಕರಾದ ಸತೀಶ್, ರಾಚಪ್ಪ, ತಾರಾ, ಜ್ಯೋತಿ, ಶಿವಶಂಕರ್ ಹಾಗೂ ನೂರಾರು ಮಕ್ಕಳು ಭಾಗವಹಿಸಿದ್ದರು.

*
ಹಳ್ಳದಕೇರಿಯ ಮಕ್ಕಳು ಹಾಗೂ ಪೋಷಕರ ಸಹಕಾರ ಚೆನ್ನಾಗಿದೆ. ನಮ್ಮೊಂದಿಗೆ ಸೇರಿ ಜಾಗೃತಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ
– ಸತೀಶ್, ದೈಹಿಕ ಶಿಕ್ಷಕ, ಹಳ್ಳದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.