ಮೈಸೂರು: ಎಸ್ಯುಸಿಐ(ಸಿ) ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ಜನ್ಮಶತಾಬ್ದಿ ಅಂಗವಾಗಿ ಜಿಲ್ಲಾ ಸಮಿತಿಯಿಂದ ಪುಸ್ತಕ ಬಿಡುಗಡೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಇಲ್ಲಿನ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಎಸ್ಯುಸಿಐ(ಸಿ) ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಎನ್.ಶ್ರೀರಾಮ್ ಅವರು ಶಿವದಾಸ್ ಘೋಷ್ ಅವರ ಕನ್ನಡ ಅನುವಾದಿತ ಪುಸ್ತಕಗಳಾದ ‘ಭಾರತದಲ್ಲಿ ಸಾಂಸ್ಕೃತಿಕ ಚಳವಳಿ ಮತ್ತು ನಮ್ಮ ಕರ್ತವ್ಯಗಳು’. ‘ಆಗಸ್ಟ್ 15ರ ಸ್ವಾತಂತ್ರ ಮತ್ತು ಜನತೆಯ ವಿಮುಕ್ತಿ’ ಮತ್ತು ‘ಚೀನಾದ ಸಾಂಸ್ಕೃತಿಕ ಕ್ರಾಂತಿ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿ, ‘ದೇಶದ ಕಾರ್ಮಿಕ ವರ್ಗ ನಿಜವಾದ ವಿಮುಕ್ತಿ ಪಡೆಯಬೇಕು ಎಂಬ ಉದ್ದೇಶದಿಂದ ಶಿವದಾಸ್ 1948ರಲ್ಲಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದರು. 1947ರಲ್ಲಿ ನಮಗೆ ಸಿಕ್ಕಿದ್ದು ರಾಜಕೀಯ ಸ್ವಾತಂತ್ರ್ಯವಷ್ಟೆ. ಇಂದಿನ ಸಾಮಾಜಿಕ ಸಮಸ್ಯೆಗಳಾದ ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣ, ಹೆಣ್ಣು ಮಕ್ಕಳ ಮೇಲೆ ಹೆಚ್ಚಾಗುತ್ತಿರುವ ಅಪರಾಧಗಳು, ಭ್ರಷ್ಟಾಚಾರ, ಬೆಲೆ ಏರಿಕೆ ಮೊದಲಾದವುಗಳನ್ನು ಆಮೂಲಾಗ್ರವಾಗಿ ಹೋಗಲಾಡಿಸಲು ಮತ್ತು ಸಮಾಜವಾದಿ ಸಮಾಜಕ್ಕಾಗಿ ಘೋಷ್ ಚಿಂತನೆಗಳು ಪ್ರಸ್ತುತವಾಗಿವೆ’ ಎಂದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ.ರವಿ ಪುಸ್ತಕಗಳ ಕುರಿತು ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯೆ ಎಂ.ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.