ಮೈಸೂರು: ‘ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆ ನಡೆಸಲು ಮಾರ್ಗದರ್ಶಕರ ಕೊರತೆಯಾಗಿದ್ದು, ಹೊಸದಾಗಿ ಪ್ರವೇಶ ಪಡೆಯುವವರಿಗೆ ತೊಡಕಾಗಿದೆ’ ಎಂದು ಆರೋಪಿಸಿ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಕ್ರಾಫರ್ಡ್ ಭವನ ಹಾಗೂ ಮಾನಸಗಂಗೋತ್ರಿ ಕ್ಲಾಕ್ ಟವರ್ ಎದುರು ಜಮಾಯಿಸಿದ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುರುಷೋತ್ತಮ್ ಮಾತನಾಡಿ, ‘ಪ್ರಾಧ್ಯಾಪಕರ ಕೊರತೆ ಕಾರಣ ಕೆ-ಸೆಟ್, ಯುಜಿಸಿ ಎನ್ಇಟಿ, ಜೆಆರ್ಎಫ್ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಮಾಡಲು ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಈಗಿರುವ ಕಾಯಂ ಪ್ರಾಧ್ಯಾಪಕರ ಬಳಿಯೇ ಮಾರ್ಗದರ್ಶನ ಪಡೆಯಲು ಅವಕಾಶ ಕೊಡಬೇಕು’ ಎಂದು ಒತ್ತಾಯಿಸಿದರು.
‘ಪಿಎಚ್.ಡಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ಸೀಟುಗಳನ್ನು ನೀಡಿ ಸಂಶೋಧನೆ ಮಾಡಲು ಅವಕಾಶ ನೀಡಬೇಕು. ಮಾನವೀಯ ಅಧ್ಯಯನ ವಿಭಾಗಗಳಲ್ಲಿ ಮಾರ್ಗದರ್ಶಕರ ಕೊರತೆ ಇರುವುದರಿಂದ, ಯುಜಿಸಿ ಮಾರ್ಗಸೂಚಿ ಅನ್ವಯ ಕ್ರಮವಹಿಸಬೇಕು. ಇತರ ವಿ.ವಿ ಅಧ್ಯಾಪಕರನ್ನು ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ನಿಯಮದಂತೆ ಕರೆಸಿಕೊಳ್ಳಬೇಕು’ ಎಂದರು.
‘ಆರ್ಥಿಕ ಹೊರೆ ಆಗದು. ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಸಹ ಪ್ರಾಧ್ಯಾಪಕರಿಗೆ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಅವಕಾಶ ನೀಡಬೇಕು’ ಎಂದು ಕೋರಿದರು.
ಸಂಶೋಧನಾ ಸಂಘದ ಅಧ್ಯಕ್ಷ ಶಿವಶಂಕರ್, ವಿಶ್ವ ಪ್ರಸಾದ್, ಉಪಾಧ್ಯಕ್ಷ ಮರಳಿ ಮಹೇಶ್, ರೋಹನ್, ರೋಜಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.