ಮೈಸೂರು: ‘ರಾಜಕಾರಣದಲ್ಲಿ ನಿಜವಾದ ನಾಯಕ ಸಿದ್ದರಾಮಯ್ಯ ಮಾತ್ರ. ಉಳಿದವರು ಯಾರೂ ನಿಜವಾದ ರಾಜಕಾರಣಿಗಳಲ್ಲ. ಅವರೆಲ್ಲ ಪುಡಾರಿಗಳು’ ಎಂದು ಚಿಂತಕ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಟೀಕಿಸಿದರು.
ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯು ಗುರುವಾರ ಇಲ್ಲಿ ಏರ್ಪಡಿಸಿದ್ದ ‘ಭಾಗ್ಯವಿಧಾತ ಸಿದ್ದರಾಮಯ್ಯ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಕರ್ನಾಟಕದಲ್ಲಿ ಬಂದ ಬಹುತೇಕ ರಾಜಕಾರಣಿಗಳು ಹಂಚಿಕೆದಾರರ ಕೆಲಸ ಮಾಡಿದರೇ ಹೊರತು, ಮಾದರಿ ರಾಜಕಾರಣಿಗಳಾಗಲಿಲ್ಲ. ಹೆಂಡ ಕೊಡಿ ಎಂದು ಕೇಳಿದವರಿಗೆಲ್ಲ ಹೆಂಡ ಕುಡಿಸುವವರು ನಿಜವಾದ ನಾಯಕರೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಕಾರ್ಯವೈಖರಿಯಲ್ಲಿ ಬಸವಣ್ಣನಿಗೆ ಸಮಾನರಾಗಿ ನಿಲ್ಲಬಲ್ಲರು. ಜನರಿಗಾಗಿ ಏನು ಮಾಡಬೇಕು ಎಂದು ಯೋಚಿಸುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅನ್ನ ಭಾಗ್ಯ ಯೋಜನೆಯನ್ನು ಘೋಷಿಸಿದ್ದರು’ ಎಂದರು.
‘ಕಾರ್ಮಿಕರು, ಭೂಮಿ ಇಲ್ಲದವರು, ದಿನಕ್ಕೆ ₹ 100 ಸಂಪಾದಿಸಲೂ ಕಷ್ಟಪಡುವ ಬಡವರು ಮಾತ್ರ ಅವರ ಮನಸ್ಸಿನಲ್ಲಿದ್ದರು. ಅವರ ಹಸಿವು ಮತ್ತು ಮನಸ್ಸು ತಣಿಸುವ ಕೆಲಸ ಮಾಡಿದರು. ಈ ಸಮಾಜಕ್ಕೆ ಅನ್ನ ಮತ್ತು ಮನಸ್ಸನ್ನು ಕೊಟ್ಟ ಏಕೈಕ ನಾಯಕ ಸಿದ್ದರಾಮಯ್ಯ’ ಎಂದು ಬಣ್ಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.