ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನ ಬೆಂಬಲವಿದೆ. ಅವರು ಅಧಿಕಾರದಲ್ಲಿ 5 ವರ್ಷವೂ ಇರಬಹುದು; 10 ವರ್ಷವೂ ಇರಬಹುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿ, ‘ನವೆಂಬರ್ ಎಂದು ನೀವೇ ಸಮಯ ನಿಗದಿಪಡಿಸಿದ್ದೀರಾ? ಈಗ ಜೂನ್ನಲ್ಲಿದ್ದೇವೆ. ನವೆಂಬರ್ ಬರಲಿ, ಆಗ ಮಾತನಾಡುತ್ತೇನೆ. ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಹಾಗೂ ನಮ್ಮ ಸರ್ಕಾರದ ಮೇಲಿದೆ. ಯಾವ ವಿಚಾರವನ್ನು ಯಾವಾಗ ನಿರ್ಧರಿಸಬೇಕೆಂದು ಹೈಕಮಾಂಡ್ಗೆ ಗೊತ್ತಿದೆ’ ಎಂದರು.
‘ಐದು ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ಈ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ ನನ್ನನ್ನು ಸಿಲುಕಿಸಲು ಯತ್ನಿಸಬೇಡಿ. ನೀವು ಪ್ರಶ್ನೆ ಕೇಳಿದ್ದೀರಾ ನಾನು ಉತ್ತರಿಸಿದ್ದೇನೆ. ನನ್ನದೇ ಪ್ರಶ್ನೆ–ನನ್ನದೇ ಉತ್ತರ ಎಂಬಂತೆ ಬಿಂಬಿಸಬೇಡಿ’ ಎಂದರು.
‘ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ’ ಎಂಬ ಬಿಜೆಪಿಯ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ‘ಬಿಜೆಪಿಗೆ ಕಿಕ್ಕೂ ಇಲ್ಲ, ಬ್ಯಾಕೂ ಇಲ್ಲ. ಅವರೇನು ಅದರ ಬಗ್ಗೆ ಮಾತನಾಡುವುದು? ಅವರು ಎಲ್ಲಾ ವಿಚಾರಗಳಲ್ಲೂ ಇಂಥಾದ್ದೇ ಆರೋಪಗಳನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ಸ್ಟೀಲ್ ಸೇತುವೆ ವಿಚಾರದಲ್ಲಿ ಇದೇ ರೀತಿ ದೂರಿದರು. ಈಗ ಆ ಸೇತುವೆ ನಿರ್ಮಾಣವಾಗದೇ ಜನ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.
‘ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಹೋಗಿದ್ದು ಒಳ್ಳೆಯದೇ ಆಯಿತು. ನಾವು ನ್ಯಾಯಾಲಯದಲ್ಲಿ ಉತ್ತರಿಸುತ್ತೇವೆ. ಇನ್ನೂ ಯಾರ್ಯಾರು, ಎಲ್ಲೆಲ್ಲಿಗೆ ದೂರು ಕೊಡುತ್ತಾರೋ ಕೊಡಲಿ. ಎಲ್ಲವನ್ನೂ ಎದುರಿಸುವ ಶಕ್ತಿ ನನಗಿದೆ. ಸ್ಮಾರ್ಟ್ ಮೀಟರ್ ವಿಚಾರದಲ್ಲಿ ಯಾವ ಕಿಕ್ ಬ್ಯಾಕ್ ಕೂಡ ನಡೆದಿಲ್ಲ. ಎಲ್ಲರಿಗೂ ವಿವರಣೆ ಕೊಟ್ಟಿದ್ದೇನೆ’ ಎಂದರು.
‘ಐಎಎಸ್ ಅಧಿಕಾರಿ ಡಿ.ಕೆ. ರವಿ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಮಾಡಿದ್ದರು. ಆಮೇಲೆ ಸಿಬಿಐ ವರದಿ ಏನು ಬಂತು? ನನ್ನ ಪಾತ್ರವೇ ಇಲ್ಲವೆಂದು ಬಂತು. ಈಗ ಬಂದಿರುವ ಆರೋಪವೂ ಅಂಥಾದ್ದೇ. ಬಿಜೆಪಿಯವರು ನನ್ನ ಮೇಲೆ ಮಾತ್ರ ಹೀಗೆ ಏಕೆ ಆರೋಪಿಸುತ್ತಾರೋ ಗೊತ್ತಿಲ್ಲ’ ಎಂದರು.
‘ನಾನು ಸಾಫ್ಟ್ ನಾಯಕನೇನಲ್ಲ. ಸೌಮ್ಯವಾಗಿ ಮಾತನಾಡುತ್ತೇನಷ್ಟೆ. ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಹಲವು ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದೇನೆ. ನಾನು ಸಾಫ್ಟ್ ಆಗಿದ್ದರೆ ಇವೆಲ್ಲಾ ಆಗುತ್ತಿತ್ತಾ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.