ADVERTISEMENT

ಸಹಿ ಸಂಗ್ರಹ: ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 15:25 IST
Last Updated 9 ಜುಲೈ 2021, 15:25 IST

ಮೈಸೂರು: ‘ಶೈಕ್ಷಣಿಕ ಕ್ಷೇತ್ರದಲ್ಲಿನ ಗೊಂದಲ ನಿವಾರಿಸುವಂತೆ ಒತ್ತಾಯಿಸಿ, ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಸಹಿ ಸಂಗ್ರಹ ಹಾಗೂ ಬೃಹತ್ ಜನಾಂದೋಲನ ನಡೆಸಲಾಗುತ್ತಿದೆ’ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕಿ ಮಾಲವಿಕಾ ಗುಬ್ಬಿವಾಣಿ ಶುಕ್ರವಾರ ಇಲ್ಲಿ ತಿಳಿಸಿದರು.

‘ಪ್ರಸ್ತುತ ಶೈಕ್ಷಣಿಕ ಕ್ಷೇತ್ರ ಅಯೋಮಯವಾಗಿದೆ. ಸರ್ಕಾರಿ–ಖಾಸಗಿ ಶಿಕ್ಷಣ ಕ್ಷೇತ್ರ ಸಂಕಷ್ಟಕ್ಕೀಡಾಗಿವೆ. ಸರ್ಕಾರ ಶಾಲೆ ಪುನರಾರಂಭಿಸುವ ಸಂಬಂಧ ಸ್ಪಷ್ಟ ನಿರ್ಧಾರ ಮಾಡದೆ ಪೋಷಕರನ್ನು ಗೊಂದಲಕ್ಕೀಡು ಮಾಡುತ್ತಿದ್ದು, ಎಲ್ಲಕ್ಕೂ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ, ಸಹಿ ಸಂಗ್ರಹ ನಡೆಸಲಾಗುವುದು’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಿಂದ 5 ಲಕ್ಷ ಜನರ ಸಹಿ ಸಂಗ್ರಹಿಸುವ ಗುರಿಯಿದೆ. ಕರಪತ್ರ, ಎಲ್‌ಇಡಿ ವಾಹನ, ವಿಚಾರಗೋಷ್ಠಿಗಳನ್ನು ನಡೆಸಿ, ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೂಲಕವೂ ಜನಾಂದೋಲನ ನಡೆಸಲಾಗುತ್ತದೆ. ನಮ್ಮ ಈ ಅಭಿಯಾನ ಬೆಂಬಲಿಸಲು ಸಾರ್ವಜನಿಕರು 7669100500 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು’ ಎಂದು ಮಾಲವಿಕಾ ಮನವಿ ಮಾಡಿದರು.

ADVERTISEMENT

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಶಾಲಾ–ಕಾಲೇಜುಗಳ ಆರಂಭಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರ ಲಸಿಕೆ ಹಾಕಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಸುರಕ್ಷತೆಯಿಂದಿರಲು ಸಾಧ್ಯ’ ಎಂದು ಮಾಲವಿಕಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಧ್ಯಮ ಸಂಯೋಜಕ ಜಿ.ಆರ್.ವಿದ್ಯಾರಣ್ಯ, ರೇಣುಕಾ ಪ್ರಸಾದ್, ಇಸ್ಮಾಯಿಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.