ಮೈಸೂರು: ‘ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಎಸ್ಜೆಸಿಇ) ಜೂನ್ 3ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಇದೇ ಮೊದಲ ಬಾರಿಗೆ ‘ಮುಕ್ತ ದಿನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರೆಲ್ಲರಿಗೂ ಪ್ರವೇಶ ಇರುತ್ತದೆ’ ಎಂದು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಜೆಎಸ್ಎಸ್–ಎಸ್ಟಿಯು) ಕುಲಸಚಿವ ಪ್ರೊ.ಎಸ್.ಎ.ಧನರಾಜ್ ತಿಳಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಎಸ್ಜೆಸಿಇ, ಜೆಎಸ್ಎಸ್– ಎಸ್ಟಿಯುನಲ್ಲಿ ವಿವಿಧ ಆಯಾಮಗಳನ್ನು ಆಧರಿಸಿದ ನೂತನ ಎಂಜಿನಿಯರಿಂಗ್, ವಿಜ್ಞಾನ ಮತ್ತು ನಿರ್ವಹಣಾ ಕೋರ್ಸ್ಗಳ ಬಗ್ಗೆ ವಿವರ ನೀಡಲಾಗುವುದು’ ಎಂದು ಹೇಳಿದರು.
‘ಸಾರ್ವಜನಿಕರು ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಯೋಜನೆಗಳು, ಸಂಶೋಧನಾ ಚಟುವಟಿಕೆ, ಉದ್ಯಮನಿರತ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗಿನ ಸಹಯೋಗ, ಉದ್ಯಮದ ಮಾರ್ಗಗಳು ಮತ್ತು ಸಾಮಾಜಿಕ ಕೊಡುಗೆಗಳಲ್ಲಿ ವಿಭಾಗಗಳ ಪಾತ್ರದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ’ ಎಂದರು.
‘ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸುಸ್ಥಿರತೆ, ನವೀನ ಮಾದರಿ, ತಯಾರಿಕೆ, ವ್ಯವಸಾಯ ಹಾಗೂ ಸಾಮಾಜಿಕ ಪ್ರಭಾವ ಬೀರುವ ತಾಂತ್ರಿಕ ಪರಿಹಾರಗಳ ಕುರಿತು ಪ್ರಾಜೆಕ್ಟ್ ತಯಾರಿಕೆ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುವುದು. ವಿಜೇತರಿಗೆ ಬಹುಮಾನ ನೀಡಲಾಗುವುದು. ಎಸ್ಜೆಸಿಇ ವಜ್ರ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಿದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.