ಮೈಸೂರು: ‘ಮಹಾರಾಜರು ಯೋಜನಾಬದ್ಧವಾಗಿ ಮೈಸೂರನ್ನು ನಿರ್ಮಿಸಿದ್ದಾರೆ. ತುಮಕೂರು, ಹುಬ್ಬಳ್ಳಿಯಂತಹ ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದವು. ನಮ್ಮೂರು ಈ ನಗರಗಳಿಗಿಂತ ಕಡೆನಾ?’ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ, ಸ್ವಪಕ್ಷೀಯ ಸಂಸದ ಪ್ರತಾಪಸಿಂಹ ವಿರುದ್ಧ ಭಾನುವಾರ ಇಲ್ಲಿ ಕಿಡಿಕಾರಿದರು.
‘ನಮ್ಮೂರು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಯಾಗಿದ್ದರೆ ಇಂತಹ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಸಮರ್ಪಕವಾಗಿ ಗ್ಯಾಸ್ ಪೈಪ್ಲೈನ್ ಅಳವಡಿಸದಿದ್ದರೆ; ಆಗುವ ದುರಂತಕ್ಕೆ ಹೊಣೆ ಯಾರು? ಅಗೆದ ರಸ್ತೆ ದುರಸ್ತಿಗೊಳಿಸುವ ವೆಚ್ಚದ ಹೊರೆ ಭರಿಸೋರು ಯಾರು? ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
‘ಸಂಸದರು ಗುತ್ತಿಗೆ ಕಂಪನಿ ಪರ ವಕಾಲತ್ತು ವಹಿಸೋ ಅವಶ್ಯವಿಲ್ಲ. ಆ ಕಂಪನಿಯ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳ ಬಳಿ ಚರ್ಚಿಸಲಿ. 500 ಕಿ.ಮೀ. ರಸ್ತೆ ದುರಸ್ತಿಗೆ ₹ 98 ಕೋಟಿ ಕೊಡ್ತಾರಂತೆ. ಈ ವಿಷಯವನ್ನು ಪ್ರಧಾನಿ ಮೋದಿ ಬಳಿ ಪ್ರಸ್ತಾಪಿಸಿದರೆ ₹ 500 ಕೋಟಿ ಕೊಡ್ತಾರೆ. ಬೀದಿಯಲ್ಲಿ ಮಾತನಾಡುವ ಅಗತ್ಯವಿಲ್ಲ’ ಎಂದು ನಾಗೇಂದ್ರ,ಪ್ರತಾಪ ಸಿಂಹಗೆ ತಿರುಗೇಟು ನೀಡಿದರು.
‘ಕಮಿಷನ್ನ ಪ್ರಶ್ನೆಯೇ ಇಲ್ಲ. ಜನರ ಹಿತಾಸಕ್ತಿ ರಕ್ಷಣೆಗಾಗಿಯೇ ಮಾತನಾಡುತ್ತಿರೋದು’ ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.