ADVERTISEMENT

ಮೈಸೂರು: ವಿವಿಸಿಇಯಲ್ಲಿ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌’

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:39 IST
Last Updated 9 ಡಿಸೆಂಬರ್ 2025, 6:39 IST
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ಗೆ ಚಾಲನೆ ನೀಡಿದ ರೋಹಿತ್ ಆರಾಧ್ಯ ಅವರನ್ನು ಅಭಿನಂದಿಸಲಾಯಿತು
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ಗೆ ಚಾಲನೆ ನೀಡಿದ ರೋಹಿತ್ ಆರಾಧ್ಯ ಅವರನ್ನು ಅಭಿನಂದಿಸಲಾಯಿತು   

ಮೈಸೂರು: ‘ಇಂದಿನ ಯುಗದಲ್ಲಿ ನಮ್ಮನ್ನು ವಿಭಿನ್ನವಾಗಿ ನೋಡುವಂತೆ ಮಾಡುವ ಅಂಶವೇ ನಮ್ಮಲ್ಲಿರುವ ನಾವೀನ್ಯತೆ’ ಎಂದು ಎಂದು ಬರಕ್ಯೂಡಾ ನೆಟ್‌ವರ್ಕ್ಸ್‌ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಆರಾಧ್ಯ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ (ವಿವಿಸಿಇ)ಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ (ಎಸ್‌ಐಎಚ್‌)–ಸಾಫ್ಟ್‌ವೇರ್ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ತಂತ್ರಜ್ಞಾನ ಪರಿವರ್ತನೆಯ ಅಂಚಿನಲ್ಲಿದ್ದೇವೆ. ಈಗ ಯಾವ ಮಾಹಿತಿ ಬೇಕಾದರೂ ಬೆರಳ ತುದಿಯಲ್ಲಿ ದೊರೆಯುತ್ತಿದೆ. ಅದನ್ನು ನೀವು ಹೇಗೆ ಬಳಸುತ್ತೀರಿ, ಅದಕ್ಕೆ ಏನು ಮೌಲ್ಯ ಹೆಚ್ಚಿಸುತ್ತೀರಿ ಮತ್ತು ನಿಮ್ಮ ಆಲೋಚನೆಯನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಜಾರಿ ಮೇಲೆ ಅವಲಂಬಿತ: 

‘ಯಶಸ್ಸು ಎನ್ನುವುದು ಶೇ 5ರಷ್ಟು ಆಲೋಚನೆ ಮತ್ತು ಶೇ 95ರಷ್ಟು ಜಾರಿಯ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಅನುಷ್ಠಾನ ನಿಮ್ಮನ್ನು ಗೆಲ್ಲಿಸುತ್ತದೆ. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು, ಅದನ್ನು ವಿಶಾಲವಾದ ದೃಷ್ಟಿಕೋನದಲ್ಲಿ ನೋಡಿ ಮತ್ತು ನೈಜ ಪರಿಸರಕ್ಕೆ ಹೊಂದುವಂತೆ ಪರಿಹರಿಸಬೇಕು’ ಎಂದು ಹ್ಯಾಕಥಾನ್‌ನಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಭಾರತೀಯ ಮಾರುಕಟ್ಟೆಯು ವಿಶಿಷ್ಟ ಮತ್ತು ಭಾವನಾತ್ಮಕವಾದುದು. ಉತ್ಪನ್ನದ ಜಯವು ಕಠಿಣ ತಂತ್ರಜ್ಞಾನದಲ್ಲಲ್ಲ, ಸರಳತೆ ಮತ್ತು ಪ್ರಸ್ತುತೆಯಲ್ಲಿ ಅಡಗಿದೆ’ ಎಂದರು.

ವಿವಿಸಿಇ ಪ್ರಾಂಶುಪಾಲ ಬಿ.ಸದಾಶಿವೇಗೌಡ, ‘ದೇಶವನ್ನು ಸೇವಾ ಆಧಾರಿತ ಆರ್ಥಿಕತೆಯಿಂದ ಉತ್ಪನ್ನ ಆಧಾರಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಅನೇಕ ಪ್ರದೇಶಗಳಿಂದ ವಿದ್ಯಾರ್ಥಿಗಳು ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದಾರೆ’ ಎಂದು ತಿಳಿಸಿದರು.

ನಾವೀನ್ಯತೆಗೆ ಒತ್ತು ಕೊಡಬೇಕು: 

‘2047ರೊಳಗೆ ಭಾರತದ ಆರ್ಥಿಕತೆಯನ್ನು 4.2 ಟ್ರಿಲಿಯನ್ ಡಾಲರ್‌ನಿಂದ 25ರಿಂದ 35 ಟ್ರಿಲಿಯನ್ ಡಾಲರ್‌ಗೆ ಏರಿಸುವ ಗುರಿ ನಮ್ಮದು. ಅದಕ್ಕಾಗಿ ಯುವಕರು ಉತ್ಪನ್ನ ಅಭಿವೃದ್ಧಿ, ಸೃಜನಾತ್ಮಕ ಚಿಂತನೆ ಮತ್ತು ನಾವೀನ್ಯತೆಗೆ ಒತ್ತು ನೀಡಬೇಕು’ ಎಂದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ, ಎಐಸಿಟಿಇ ಪ್ರತಿನಿಧಿ ಅಖಿಲೇಶ್ ಕುಮಾರ್‌ಸಿಂಗ್, ಉಪ ಪ್ರಾಂಶುಪಾಲ ಶೋಭಾ ಶಂಕರ್, ನೋಡಲ್‌ ಸೆಂಟರ್‌ನ ಆದಿತ್ಯ ಸಿ.ಆರ್. ಮತ್ತು ನಿತಿನ್‌ಕುಮಾರ್ ಹಾಜರಿದ್ದರು.  

ಪಾಲ್ಗೊಂಡಿದ್ದ ವಿದ್ಯಾರ್ಥಿಗಳು

‘ಹೆಚ್ಚು ಮಂದಿ ಪ್ರತಿನಿಧಿಸುವ ಕೇಂದ್ರ’

ಸಂಯೋಜಕ ರವಿಕುಮಾರ್ ವಿ. ಮಾತನಾಡಿ ‘ಈ ಕಾರ್ಯಕ್ರಮವು ದೇಶದಾದ್ಯಂತ 60 ನೋಡಲ್‌ ಕೇಂದ್ರಗಳಲ್ಲಿ ನಡೆಯುತ್ತಿದೆ. ಕರ್ನಾಟಕದಲ್ಲಿ ವಿವಿಸಿಇ 2ನೇ ಅತಿ ಹೆಚ್ಚು ಪ್ರತಿನಿಧಿಸುವ ಕೇಂದ್ರವಾಗಿದ್ದು ದೇಶದ ಪ್ರಮುಖ ಸಂಸ್ಥೆಗಳಿಂದ ಬಂದ 20 ತಂಡಗಳ 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಐಸಿಟಿಇನಿಂದ ಕೊಟ್ಟಿರುವ ನೈಜ ಜೀವನ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಪರ್ಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.