ADVERTISEMENT

‘ಎಸ್‌ಆರ್‌ ದರ ಹೆಚ್ಚಳ; ಅಭಿವೃದ್ಧಿಗೆ ಸಹಕರಿಸಿ’

ಸಕಾಲಕ್ಕೆ ಸರಿಯಾಗಿ ಗುಣಮಟ್ಟದ ಕೆಲಸ ನಿರ್ವಹಿಸಿ; ಜಯವಿಭವಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 12:56 IST
Last Updated 28 ಡಿಸೆಂಬರ್ 2021, 12:56 IST
ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಅವರನ್ನು ಮಂಗಳವಾರ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು
ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಅವರನ್ನು ಮಂಗಳವಾರ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು   

ಮೈಸೂರು: ‘ತಿಂಗಳೊಳಗೆ ಎಸ್‌ಆರ್‌ ದರ ಪರಿಷ್ಕೃತಗೊಳ್ಳಲಿದೆ. ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಕಲ್ಯಾಣಕ್ಕೆ ಸಂಘ ಶ್ರಮಿಸುತ್ತಿರುವಂತೆ; ಸೆಸ್ಕ್‌ನ ಕಲ್ಯಾಣಕ್ಕೂ ಪೂರಕವಾಗಿ ಸಹಕರಿಸಬೇಕು’ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಮಂಗಳವಾರ ಇಲ್ಲಿ ಮನವಿ ಮಾಡಿದರು.

ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಶತಮಾನೋತ್ಸವ ಸಂಭ್ರಮ–2022ರ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ‘ಸೆಸ್ಕ್‌ ನಷ್ಟದ ಕೂಪದಲ್ಲಿದೆ. ಮುಂದಿನ ನಾಲ್ಕು ವರ್ಷದಲ್ಲಿ ಲಾಭದತ್ತ ಕೊಂಡೊಯ್ಯಲು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ವಿದ್ಯುತ್‌ ಬಿಲ್‌ ಬಾಕಿಯನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಸೆಸ್ಕ್‌ ಕ್ರಮ ಕೈಗೊಳ್ಳುತ್ತಿದೆ. ಯಾವುದೇ ಒತ್ತಡಕ್ಕೂ ಮಣಿಯುತ್ತಿಲ್ಲ. ಮೂಲ ಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು’ ಎಂದರು.

ADVERTISEMENT

‘ವಿದ್ಯುತ್ ಗುತ್ತಿಗೆದಾರರ ಸಮಸ್ಯೆಯ ಅರಿವಿದೆ. ಅವಕಾಶವಿದ್ದೆಡೆ ತುಂಡು ಗುತ್ತಿಗೆ ನೀಡುತ್ತೇವೆ. ಸಾಧ್ಯವಿದ್ದೆಡೆ ಕೆಲಸ ಕೊಡುತ್ತೇವೆ. ಸಕಾಲಕ್ಕೆ ಬಿಲ್‌ ಪಾವತಿಸಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಸಂಘದ ಪದಾಧಿಕಾರಿಗಳ ನಿಯೋಗ ಭೇಟಿಯಾಗಿ ಮನವಿ ಕೊಡಲಿ. ಸಾಧ್ಯವಾದ ಎಲ್ಲ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು. ನೀವುಗಳು ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸುವ ಜೊತೆಗೆ ಗುಣಮಟ್ಟದ ಕೆಲಸ ನಿರ್ವಹಿಸಿ’ ಎಂದು ಜಯವಿಭವಸ್ವಾಮಿ ಕಿವಿಮಾತು ಹೇಳಿದರು.

ಜಯವಿಭವಸ್ವಾಮಿ ಸೇರಿದಂತೆ ಸೆಸ್ಕ್‌ನ ತಾಂತ್ರಿಕ ನಿರ್ದೇಶಕ ನಾಗಾರ್ಜುನ, ಮುಖ್ಯ ಎಂಜಿನಿಯರ್ ಕೆ.ಎಂ.ಮಹದೇವಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್ ಯೋಗೇಶ್‌ ಅವರನ್ನು ಗುತ್ತಿಗೆದಾರರ ಸಂಘದಿಂದ ಸನ್ಮಾನಿಸಲಾಯಿತು.

ಗುತ್ತಿಗೆದಾರರಾದ ರಮೇಶ್‌, ಶೇಖರ್, ನಟೇಶ್‌ ತಮ್ಮ ಸಂಕಷ್ಟ ಹೇಳಿಕೊಂಡರು. ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ಧರ್ಮವೀರ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.