ಪ್ರಾತಿನಿಧಿಕ ಚಿತ್ರ
ಮೈಸೂರು: ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು 9ರಿಂದ 10ಗಂಟೆಗೆ ಹಾಗೂ ಹೆಚ್ಚುವರಿ ಅವಧಿಯನ್ನು (ಒಟಿ) 10ರಿಂದ 12ಗಂಟೆಗೆ ಏರಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ವಿರೋಧಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ರವಿ, ‘8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ, 8 ಗಂಟೆ ಖಾಸಗಿ ಬದುಕು ಎಂಬ ವೈಜ್ಞಾನಿಕ ನೀತಿಯು ಕಾರ್ಮಿಕರ ರಕ್ತಸಿಕ್ತ ಹೋರಾಟದ ಫಲವಾಗಿ ಜಗತ್ತಿನಾದ್ಯಂತ ಒಪ್ಪಿತವಾಗಿದೆ. ಆದರೆ, ಉದಾರೀಕರಣ, ಖಾಸಗೀಕರಣ ಜಾರಿ ನಂತರ ಬಂಡವಾಳಶಾಹಿಗಳ ಗರಿಷ್ಠ ಲಾಭದ ದಾಹ ಪೂರೈಸಲು ಕಾರ್ಮಿಕರನ್ನು ಮಿತಿ ಮೀರಿ ಶೋಷಣೆ ಮಾಡಲು ಸರ್ಕಾರಗಳು ಅವಕಾಶ ಕೊಡುತ್ತಿವೆ’ ಎಂದು ದೂರಿದ್ದಾರೆ.
‘ಕೆಲಸದ ಅವಧಿ ಹೆಚ್ಚಿಸುವುದರಿಂದ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ. ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಮತ್ತು ಉದ್ಯೋಗಗಳು ನಷ್ಟವಾಗುತ್ತವೆ ಎಂಬುದು ನೀತಿ ನಿರೂಪಕರಿಗೆ ಅರ್ಥವಾಗದ ವಿಷಯವಲ್ಲ. ಆದಾಗ್ಯೂ, ಇಂತಹ ನೀತಿ ಬರಲು ಇಂದು ಚಿಲ್ಲರೆ ವ್ಯಾಪಾರದ ಮೇಲೆ ಹಿಡಿತ ಸಾಧಿಸುತ್ತಿರುವ ದೇಶ ವಿದೇಶಗಳ ಬೃಹತ್ ಮಾಲ್ಗಳ ಒಡೆಯರ ಪ್ರಭಾವವೇ ಕಾರಣ ಎಂಬುದು ದುಡಿಯುವ ಜನರ ಆಕ್ಷೇಪವಾಗಿದೆ’ ಎಂದು ಹೇಳಿದ್ದಾರೆ.
‘ಜೊತೆಗೆ 10ಕ್ಕಿಂತ ಕಡಿಮೆ ಕಾರ್ಮಿಕರು ಇರುವ ಅಂಗಡಿಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದಲೇ ಹೊರಗಿಡುವ ಪ್ರಸ್ತಾಪವು, ಈ ಸರ್ಕಾರಕ್ಕೆ ದುಡಿಯುವ ಜನರ ಕುರಿತಾದ ನಿಷ್ಕಾಳಜಿಯನ್ನು ತೋರಿಸುತ್ತದೆ. ಇಂತಹ ಅಪ್ಪಟ ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.