ADVERTISEMENT

ಹಣ ಕೊಟ್ಟವರ ಒತ್ತಡ: ಆತ್ಮಹತ್ಯೆ ಯತ್ನ

ಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 2:01 IST
Last Updated 3 ಫೆಬ್ರುವರಿ 2021, 2:01 IST
ಚಾಕು ಇರಿದುಕೊಂಡ ರಾಧಾಕೃಷ್ಣನನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು
ಚಾಕು ಇರಿದುಕೊಂಡ ರಾಧಾಕೃಷ್ಣನನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು   

ಮೈಸೂರು: ಸಾಲ ಕೊಡಿಸುವುದಾಗಿ ಮುಂಗಡ ಪಡೆದಿದ್ದ ವ್ಯಕ್ತಿಯೊಬ್ಬ, ಹಣ ಕೊಟ್ಟವರ ಒತ್ತಡ ಸಹಿಸಲಾಗದೆ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದಲ್ಲಿ ಮಂಗಳವಾರ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು.

ಮಂಡಿಮೊಹಲ್ಲಾದ ರಾಧಾಕೃಷ್ಣ (55) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.

ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ರಾಧಾಕೃಷ್ಣನನ್ನು ಕೆ.ಆರ್‌.ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಒಂದೂವರೆ ಇಂಚಿನಷ್ಟು ಆಳದ ಗಾಯವಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಧಾನಮಂತ್ರಿ ರೋಜಗಾರ್‌ ಯೋಜನೆಯಡಿ ಸಾಲ ಕೊಡಿಸುತ್ತೇನೆಂದು ಹೇಳಿ ರಾಧಾಕೃಷ್ಣ ಕೆಲವರಿಂದ ಮುಂಗಡವಾಗಿ ಹಣ ಪಡೆದಿದ್ದರು. ಕೋವಿಡ್‌ನಿಂದ ಬ್ಯಾಂಕ್‌ಗಳಲ್ಲಿ ಸಕಾಲಕ್ಕೆ ಸಾಲ ಮಂಜೂರಾಗಿರಲಿಲ್ಲ.

ಹಣ ಕೊಟ್ಟವರು ವಾಪಸ್‌ ನೀಡುವಂತೆ ನಿತ್ಯವೂ ಕೇಳಿದ್ದಾರೆ. ಎಂದಿನಂತೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಉದ್ಯಾನದಲ್ಲಿದ್ದ ಸಂದರ್ಭ, ಹಣ ಕೊಟ್ಟವರು ಬಂದು ಕೊಟ್ಟ ದುಡ್ಡು ಮರಳಿಸುವಂತೆ ಒತ್ತಾಯಿಸಿದ್ದಾರೆ.

ಒತ್ತಡ ತಾಳಲಾರದ ರಾಧಾಕೃಷ್ಣ ಮೂತ್ರ ವಿಸರ್ಜಿಸಿ ಬರುವೆ ಎಂದು ಉದ್ಯಾನದ ಬೇಲಿ ಬದಿಗೆ ತೆರಳಿ ಚಾಕುವಿನಿಂದ ಚುಚ್ಚಿಕೊಂಡು ಗಾಯಗೊಂಡಿದ್ದಾರೆ. ಈತನ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಲಕ್ಷ್ಮೀಪುರಂ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.