ಮೈಸೂರು: ನಟನ ರಂಗಶಾಲೆಯ ‘ರಜಾಮಜಾ’ ಮಕ್ಕಳ ಬೇಸಿಗೆ ಶಿಬಿರಕ್ಕೆ ಹಿರಿಯ ಕಲಾವಿದ ‘ಮುಖ್ಯಮಂತ್ರಿ’ ಚಂದ್ರು ಗುರುವಾರ ಇಲ್ಲಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ನಟನ ಅಧ್ಯಕ್ಷ ಸುಬ್ರಹ್ಮಣ್ಯಂ ಅವರು ನಟಿ ಮತ್ತು ಗಾಯಕರಾದ ಸುಭದ್ರಮ್ಮ ಮನ್ಸೂರ್ ಅವರಿಗೆ ‘ನಟನ ಪುರಸ್ಕಾರ– 2019’ನ್ನು ಪ್ರದಾನ ಮಾಡಿದರು.
ಕಳೆದ 17 ವರ್ಷಗಳ ಹಿಂದೆ ಸ್ಥಾಪನೆಯಾದ ನಟನ ರಂಗಶಾಲೆಯು ರಂಗಭೂಮಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಬದುಕನ್ನು ಸವೆಸಿದ ಸಾಧಕರನ್ನು ಗುರುತಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವುದಕ್ಕೆ ಹಾಗೂ ಗೌರವಿಸುವುದಕ್ಕಾಗಿ ಈ ಪುರಸ್ಕಾರವನ್ನು ಪ್ರತಿವರ್ಷ ನೀಡುತ್ತಿದೆ.
ಬಳಿಕ ಮಾತನಾಡಿದ ‘ಮುಖ್ಯಮಂತ್ರಿ ಚಂದ್ರು’, ‘ರಂಗಭೂಮಿ ಇಲ್ಲದೇ ಮನುಷ್ಯ ಇಲ್ಲ, ಮನುಷ್ಯತ್ವ ಇಲ್ಲ. ಅದೊಂದು ಜೀವಂತ ಕಲಾಕೇಂದ್ರ’ ಎಂದು ಬಣ್ಣಿಸಿದರು.
ಮಕ್ಕಳು ರಂಗಭೂಮಿಯಲ್ಲಿ ಕಲಿಯುವುದರ ಜತೆಜತೆಗೆ ಉತ್ತಮ ಶಿಕ್ಷಣವನ್ನೂ ಪಡೆದುಕೊಳ್ಳಬೇಕು. ಹಿರಿಯ ರಂಗಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲೆ, ನೃತ್ಯ, ಸಂಗಿತ, ನಾಟಕಗಳಲ್ಲಿ ರಂಗಭೂಮಿಯು ಜೀವಂತ ಮತ್ತು ಶ್ರೇಷ್ಠವಾದುದು. ಇಂತಹ ರಂಗಭೂಮಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸಿಕೊಡುತ್ತದೆ ಎಂದರು.
ಇದಕ್ಕೂ ಮುನ್ನ ದಿಶಾ ರಮೇಶ್ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ನಟನ ವಾರಾಂತ್ಯ ರಂಗಶಾಲೆಯ ಮಕ್ಕಳಿಂದ ನಾಟಕ ‘ಭಾಸ ಭಾರತ’ವನ್ನು ಪ್ರಸ್ತುತಪಡಿಸಲಾಯಿತು. ಇದಕ್ಕೆ ಸಂಗೀತ, ವಿನ್ಯಾಸ ಮತ್ತು ನಿರ್ದೇಶನವನ್ನು ಮೇಘಾ ಸಮೀರಾ ನೀಡಿದ್ದರು. ಮಲ್ಲಿಕಾರ್ಜುನ್ ಮತ್ತು ತಂಡದವರಿಂದ ಚಿತ್ರಕಲಾ ಪ್ರದರ್ಶನವೂ ಇತ್ತು. ಶಿಬಿರಾರ್ಥಿಗಳಿಗೆ ಉಚಿತವಾಗಿ ಸಸಿ ವಿತರಿಸಲಾಯಿತು.
ರಂಗಕರ್ಮಿ ಮಂಡ್ಯರಮೇಶ್, ‘ಪ್ರಜಾವಾಣಿ’ಯ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ಜೆ.ಮರಿಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.