ADVERTISEMENT

ಉಚ್ಚಗಣಿ ದೇಗುಲ ಮರು ನಿರ್ಮಿಸದಿದ್ದರೆ ಹೋರಾಟ: ಶ್ರೀಶೈಲ ಮಠದ ಸ್ವಾಮೀಜಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:57 IST
Last Updated 25 ಸೆಪ್ಟೆಂಬರ್ 2021, 5:57 IST
ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ನೆಲಸಮಗೊಂಡ ಮಹದೇವಮ್ಮ ದೇಗುಲವನ್ನು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪರಿಶೀಲಿಸಿದರು. ವಿವಿಧ ಸ್ವಾಮೀಜಿಗಳು ಇದ್ದರು
ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ನೆಲಸಮಗೊಂಡ ಮಹದೇವಮ್ಮ ದೇಗುಲವನ್ನು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪರಿಶೀಲಿಸಿದರು. ವಿವಿಧ ಸ್ವಾಮೀಜಿಗಳು ಇದ್ದರು   

ನಂಜನಗೂಡು/ ಹಂಪಾಪುರ: ‘ಉಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನದ ಮರು ನಿರ್ಮಾಣಕ್ಕೆ ಸರ್ಕಾರ ಕ್ರಮವಹಿಸದಿದ್ದರೆ, ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿರುವ ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟವನ್ನು ಬೆಂಬಲಿಸ ಬೇಕಾಗುತ್ತದೆ’ ಎಂದು ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಉಚ್ಚಗಣಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಸ್ವಾಮೀಜಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿದರು.

‘ಜನರ ಭಾವನೆಗಳ ಮುಂದೆ ಯಾರೂ ದೊಡ್ಡವರಲ್ಲ. ಅಭಿವೃದ್ಧಿ ಹೆಸರಿನಲ್ಲಿ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು. ದೇಗುಲ ಮರು ನಿರ್ಮಾಣದ ಆಶ್ವಾಸನೆ ನೀಡಿದರೆ ಸಾಲದು. ಅನುಷ್ಠಾನಕ್ಕೆ ತರುವ ಮೂಲಕ ಭಕ್ತರ ನಂಬಿಕೆ ಉಳಿಸಿ ಕೊಳ್ಳಬೇಕು. ಇಲ್ಲದಿದ್ದರೆ ಜಗದೀಶ್ ಕಾರಂತ್ ನೇತೃತ್ವದಲ್ಲಿ ಸೆ.28ರಂದು ಹಮ್ಮಿಕೊಂಡಿರುವ ಬೆಂಗಳೂರು ಪಾದಯಾತ್ರೆ ಬೆಂಬಲಿಸಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಅಧಿಕಾರಿಗಳು ವರ್ತಿಸಬಾರದು. ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಅಧಿಕಾರಿಗಳಿಗೆ ಸರ್ಕಾರ ಬಿಸಿ ಮುಟ್ಟಿಸಬೇಕು’ ಎಂದರು.

ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೇ ಏಕಾಏಕಿ ಕೆಡವಿರುವುದು ಸರಿಯಲ್ಲ. ದೇವಸ್ಥಾನ ವನ್ನು ಶಿಲೆಯಿಂದ ನಿರ್ಮಿಸಲಿ’ ಎಂದು ಸಲಹೆ ನೀಡಿದರು.

ಕೊಟ್ಟೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರೇಅಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ, ಮೈಸೂರಿನ ಜಪದಕಟ್ಟೆ ಮಠದ ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ದಾಂಡೇಲಿ ಅಂಬಿಕಾನಗರ ಮಠದ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ, ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಎಸ್.ಚಂದ್ರಶೇಖರ್, ನಿತಿನ್, ಹಿಂದೂ ಜಾಗರಣ ವೇದಿಕೆಯ ಲೋಹಿತ್ ಅರಸ್, ಗ್ರಾಮದ ಮುಖಂಡರಾದ ನರಸಿಂಹೇಗೌಡ, ನಾಗಣ್ಣ, ಬಾಲರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.