ಮೈಸೂರು: ‘ಮಕ್ಕಳಿಗೆ ತಾಯಿ ಮೊದಲ ಗುರುವಾದರೆ ಶಿಕ್ಷಕರು ಎರಡನೇ ತಾಯಿ ಇದ್ದಂತೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಅವರ ಪಾತ್ರ ಮಹತ್ವದ್ದು’ ಎಂದು ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಬಣ್ಣಿಸಿದರು.
ಪರೀಕ್ಷಾ ಸ್ಫೂರ್ತಿ ಫೌಂಡೇಶನ್ನಿಂದ ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಶಿಕ್ಷಕ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಹುದ್ದೆ ಅಲಂಕರಿಸಿ, ಏನೇ ಸಾಧನೆ ಮಾಡಿದರೂ, ಆತನ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ದೊಡ್ಡದಿರುತ್ತದೆ. ಶಿಕ್ಷಕರನ್ನು ಗೌರವಿಸುವುದು ಸಂತೋಷದ ಕೆಲಸ. ನಿಮ್ಮ ಪರವಾದ ಹೋರಾಟ ಮತ್ತು ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.
ರಾಜ್ಯದ ವಿವಿಧ ಶಾಲೆಗಳ 20 ಶಿಕ್ಷಕರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಗೌಡ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶ್ರುತ್ ಗೌಡ, ಇಫಿಮೆಡ್ ಸಂಸ್ಥೆಯ ಎ. ಸುಧೀಂದ್ರ, ಬಸವರಾಜೇಂದ್ರ ಸ್ವಾಮಿ ಫೌಂಡೇಷನ್ ಅಧ್ಯಕ್ಷ ಯೋಗೇಶ್ ಚುಂಚನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.