ಮೈಸೂರು: ‘ಶತಮಾನದ ಇತಿಹಾಸವಿರುವ ದಿ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್ ಸಾವಿರಾರು ನೌಕರರ ಬದುಕಿಗೆ ಆರ್ಥಿಕ ಚೈತನ್ಯ ತುಂಬಿದೆ’ ಎಂದು ಕಾಂಗ್ರೆಸ್ ಮುಖಂಡ ಎಂ.ಕೆ. ಸೋಮಶೇಖರ್ ಶ್ಲಾಘಿಸಿದರು.
ಜೆ.ಕೆ. ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಬ್ಯಾಂಕಿನ 105ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ರೈಲ್ವೆ ಇಲಾಖೆಯು ದೇಶದ ಒಗ್ಗೂಡುವಿಕೆಗೆ ಸಾಕ್ಷಿಯಾಗಿ ನಿಂತಿದೆ. ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಇಲಾಖೆ ಕೂಡ ಹೌದು. ಇಂತಹ ಇಲಾಖೆಗೆ ಸಂಬಂಧಿಸಿದ ನೌಕರರ ಸಹಕಾರಕ್ಕಾಗಿ ಸ್ಥಾಪಿತವಾದ ಬ್ಯಾಂಕ್ ಖಾಸಗಿ ಲೇವಾದೇವಿದಾರರ ಹಿಡಿತದಿಂದ ನೌಕರರನ್ನು ತಪ್ಪಿಸಿದೆ. ಅವರಿಗೆ ಆರ್ಥಿಕ ಬಲ ನೀಡಿದೆ’ ಎಂದರು.
ನೈರುತ್ಯ ರೈಲ್ವೆ ಮೈಸೂರು ಕಾರ್ಯಾಗಾರದ ಮುಖ್ಯ ಕಾರ್ಯ ವ್ಯವಸ್ಥಾಪಕ ವಿ.ಕೆ.ಚಡ್ಡಾ ‘ಬ್ಯಾಂಕ್ ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ₹1250 ಕೋಟಿಗೂ ಅಧಿಕ ವಹಿವಾಟು ಹೊಂದಿರುವುದು ಶ್ಲಾಘನೀಯ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಉಪಾಧ್ಯಕ್ಷ ಎಸ್. ಆನಂದ್, ‘1920ರಲ್ಲಿ ಆರಂಭಗೊಂಡ ಈ ಬ್ಯಾಂಕ್ ಕೇವಲ ಹಣಕಾಸು ಸಂಸ್ಥೆ ಇದಲ್ಲ, ಸಹಕಾರ ಚಳವಳಿಯ ಜೀವಂತ ಮಾದರಿ’ ಎಂದರು.
ಬ್ಯಾಂಕಿನ ನಿವೃತ್ತ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸದಸ್ಯರಿಗಾಗಿ ಆರೋಗ್ಯ ತಪಾಸಣೆ ನಡೆಯಿತು.
ಬ್ಯಾಂಕಿನ ಅಧ್ಯಕ್ಷ ಎಂ.ಬಿ. ಮಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಕೆಂಗೇರಿಯ ಒಕ್ಕಲಿಗರ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಡಾ. ಎಸ್.ಪಿ. ಯೋಗಣ್ಣ, ಮಾಜಿ ಮೇಯರ್ ಪುರುಷೋತ್ತಮ್, ಬ್ಯಾಂಕಿನ ಸಿಇಒ ಎಸ್.ಜೆ. ನಾರಾಯಣ, ಪ್ರಧಾನ ವ್ಯವಸ್ಥಾಪಕರಾದ ಎಂ.ಸಿ. ಲಕ್ಷ್ಮಿ ಪ್ರಸಾದ್, ಎಚ್.ಸಿ. ಸತ್ಯನಾರಾಯಣ, ಆಡಳಿತ ಮಂಡಳಿ ನಿರ್ದೇಶಕರಾದ ಹನುಮಂತ, ಎಸ್. ಮುತ್ತುಕುಮಾರ್, ಎಂ. ಯತಿರಾಜು, ಸಿ.ಎಚ್. ಮಂಜುನಾಥ್, ಎಸ್. ಉತ್ತೇಜ್, ಸಿ. ನಿರ್ಮಲಾ, ಎನ್.ಎಸ್. ನಂದಕುಮಾರ್, ಎಂ.ಬಿ. ಯೋಗಾನಂದ, ಆರ್. ಚಂದ್ರಶೇಖರ, ಸಿ. ರಾಮನಾಥನ್, ಸಿ. ಶಿವಶಂಕರ್, ಎಸ್. ಶ್ವೇತಾ, ಪಿ. ಚಂದ್ರಶೇಖರ, ಮಾಜಿ ಅಧ್ಯಕ್ಷರಾದ ವಿ.ಆರ್. ಶ್ರೀಧರ್, ಅನ್ಬು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.