ಮೈಸೂರು: ಹವ್ಯಾಸಿ ಕಲಾವಿದರನ್ನು ಪ್ರೋತ್ಸಾಹಿಸಲು, ಅವರಿಗೆ ರಂಗಶಿಕ್ಷಣ ನೀಡಲು 2020- 21ನೇ ಸಾಲಿನಲ್ಲಿ ರಂಗಾಯಣವು ‘ಸುಬ್ಬಯ್ಯ ನಾಯ್ಡು ಹವ್ಯಾಸಿ ಅಭಿನಯ ರಂಗ ತರಬೇತಿ’ ಶಿಬಿರವನ್ನು ಅ.15 ರಿಂದ 2021ರ ಜ.15 ರವರೆಗೆ ಹಮ್ಮಿಕೊಂಡಿದೆ.
3 ತಿಂಗಳ ಈ ತರಬೇತಿಯಲ್ಲಿ 25 ಹವ್ಯಾಸಿ ಕಲಾವಿದರಿಗೆ ಅವಕಾಶ ಇದೆ. ಕಲಾವಿದರ ಆಯ್ಕೆ ಸಂದರ್ಶನ ಅ.7ರಂದು ನಡೆಯಲಿದೆ. ಶಿಬಿ ರದ ನಿರ್ದೇಶಕರಾಗಿ ಜೀವನ್ ಕುಮಾರ್ ಬಿ.ಹೆಗ್ಗೋಡು, ಸಂಚಾಲಕರಾಗಿ ಡಿ.ಯೋಗಾನಂದ್ ಕಾರ್ಯ ನಿರ್ವ ಹಿಸು ವರು ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.
2019-20ನೇ ಸಾಲಿನ ರಂಗಶಿಕ್ಷ ಣದ ಅಂತಿಮ ಪರೀಕ್ಷೆಯು ಅ.12ರಿಂದ 16ರವರೆಗೆ ನಡೆಯಲಿದೆ ಎಂದು ಹಂಪಿ ವಿಶ್ವವಿದ್ಯಾಲಯ ಘೋಷಿಸಿದೆ ಎಂದರು.
ಕೋವಿಡ್-19 ಕಾರಣದಿಂದ ರಂಗಭೂಮಿ ಸಂಕಷ್ಟ ಅನುಭವಿಸಿದ್ದು, ಈ ಮಧ್ಯೆ ಮೈಸೂರು ರಂಗಾಯಣವು ರಂಗಭೂಮಿಯನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡಿದೆ. ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಎಚ್.ಕೆ.ದ್ವಾರಕಾನಾಥ್ ರೂಪಿಸಿದ 50 ಅಡಿ ಉದ್ದದ ಭಿತ್ತಿಚಿತ್ರ ಕಾರ್ಯಕ್ರಮ `ಸಂಭವಾಮಿ ಯುಗೇ ಯುಗೇ’ ನಡೆದಿದೆ. ರಂಗಾಯಣದ ಪ್ರಯೋಗಶೀಲ ನಾಟಕ `ಪರ್ವ' ಪ್ರದರ್ಶನಕ್ಕೆ ಸಿದ್ಧತೆ ನಡೆದಿದ್ದು, ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿ ರಂಗಪಠ್ಯದ ರಚನೆ ಪೂರ್ಣಗೊಳಿಸಿದ್ದಾರೆ ಎಂದರು.
‘ಬಹುರೂಪಕಗಳ ಬಹುರೂಪಿ’ ಎಂಬ 30 ನಿಮಿಷದ ಸಾಕ್ಷ್ಯಚಿತ್ರವನ್ನು ₹1 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ. ದೇವನೂರು ಮಹಾದೇವ ಅವರ `ಕುಸುಮಬಾಲೆ' ಕಾದಂಬರಿಯ ರಂಗ ರೂಪವನ್ನು ವಾಚಿಕ ಅಭಿನಯದಲ್ಲಿ ಚಿತ್ರೀಕರಿಸಿ ಯೂಟ್ಯೂಬ್, ರಂಗಾ ಯಣದ ವೆಬ್ಸೈಟ್ಗೆ ಅಪಲೋಡ್ ಮಾಡಲಾಗಿದೆ.
ಕಿಂದರಿಜೋಗಿ ನಾಟಕದ ವಾಚಿಕಾಭಿನಯ, ಹಾಡುಗಳ ಚಿತ್ರೀಕರಣದ ಡಿವಿಡಿಯನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಗೆ ಕಳುಹಿಸಿಕೊ ಡಲಾಗಿದೆ. ಇದನ್ನು ವಿದ್ಯಾರ್ಥಿಗಳಿಗೆ ಪ್ರಸಾರ ಮಾಡುವುದಾಗಿ ಸಚಿವ ಎಸ್.ಸುರೇಶ್ಕುಮಾರ್ ಒಪ್ಪಿದ್ದಾರೆ ಎಂದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಬಿ.ವಿ.ಕಾರಂತರ ಹೆಸರಿನಲ್ಲಿ ರಂಗಾಯಣದ ಆವರಣದಲ್ಲಿ `ಬಿ.ವಿ. ಕಾರಂತ ರಂಗಸಮುಚ್ಛಯ' ಕಟ್ಟಡವನ್ನು ಸುಮಾರು ₹ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಾಗಿದೆ ಎಂದು ಕಾರ್ಯಪ್ಪ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.