ADVERTISEMENT

‘ನ್ಯಾಯಾಂಗ ಸ್ವಾತಂತ್ರ್ಯದಲ್ಲಿ ರಾಜಿಯಿಲ್ಲ’

ಜೆಎಸ್‌ಎಸ್ ಕಾನೂನು ಕಾಲೇಜು; 17ನೇ ಪದವಿ ಪ್ರದಾನ ಸಮಾರಂಭದಲ್ಲಿ ನ್ಯಾ.ಉಜ್ಜಲ್ ಭೂಯನ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:18 IST
Last Updated 17 ಆಗಸ್ಟ್ 2025, 5:18 IST
ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ 17ನೇ ಪದವಿ ಪ್ರದಾನ ಸಮಾರಂಭದಲ್ಲಿ ರ್‍ಯಾಂಕ್‌ ವಿಜೇತರಿಗೆ ಪ್ರಮಾಣಪತ್ರ ನೀಡಲಾಯಿತು. ಪ್ರೊ.ಪಿ.ಶಿವಾನಂದಭಾರತಿ, ಪ್ರೊ.ಕೆ.ಎಸ್.ಸುರೇಶ್, ನ್ಯಾ.ಉಜ್ಜಲ್ ಭೂಯನ್, ನ್ಯಾ.ಅನು ಶಿವರಾಮನ್‌, ಸಿ.ಜಿ.ಬೆಟಸೂರಮಠ, ಎನ್.ವಾಣಿಶ್ರೀ ಹಾಜರಿದ್ದರು
ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ 17ನೇ ಪದವಿ ಪ್ರದಾನ ಸಮಾರಂಭದಲ್ಲಿ ರ್‍ಯಾಂಕ್‌ ವಿಜೇತರಿಗೆ ಪ್ರಮಾಣಪತ್ರ ನೀಡಲಾಯಿತು. ಪ್ರೊ.ಪಿ.ಶಿವಾನಂದಭಾರತಿ, ಪ್ರೊ.ಕೆ.ಎಸ್.ಸುರೇಶ್, ನ್ಯಾ.ಉಜ್ಜಲ್ ಭೂಯನ್, ನ್ಯಾ.ಅನು ಶಿವರಾಮನ್‌, ಸಿ.ಜಿ.ಬೆಟಸೂರಮಠ, ಎನ್.ವಾಣಿಶ್ರೀ ಹಾಜರಿದ್ದರು   

ಮೈಸೂರು: ‘ಭಾರತೀಯ ನ್ಯಾಯಾಂಗಕ್ಕೆ ತನ್ನದೇ ಆದ ಪರಂಪರೆಯಿದ್ದು, ಎಂತಹ ಸಂದರ್ಭದಲ್ಲೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭೂಯನ್ ಹೇಳಿದರು.

ನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ 17ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

‘ಸಾವಿರಾರು ನ್ಯಾಯಾಧೀಶರು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೆಡೆ ರಾಜಕೀಯ, ಕಾರ್ಯಾಂಗದ ಒತ್ತಡ ನ್ಯಾಯಾಂಗದ ಅನುಭವಕ್ಕೂ ಬಂದಿರಬಹುದು. ಆದರೆ ಇದೆಲ್ಲವನ್ನು ನಿಭಾಯಿಸುವ ಭದ್ರ ಬುನಾದಿಯನ್ನು ನಮ್ಮ ಪೂರ್ವಿಕರು ನೀಡಿದ್ದು, ನ್ಯಾಯಾಂಗ ಸ್ವಾತಂತ್ರ್ಯ ವಿಷಯದಲ್ಲಿ ಎಂದಿಗೂ ಯಾವುದೇ ರಾಜಿಯಿಲ್ಲ’ ಎಂದರು.

ADVERTISEMENT

‘ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅತ್ಯುತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಅದರ ಮೂಲಕ ಊಳಿಗಮಾನ್ಯ, ತಾರತಮ್ಯವನ್ನು ಅನುಸರಿಸುತ್ತಿದ್ದ ಸಮಾಜವನ್ನು ಆಧುನಿಕ, ಸಮಾನತೆಯನ್ನು ಗೌರವಿಸುವ ಸಮಾಜವನ್ನಾಗಿ ನಿರ್ಮಿಸುವ ಕೆಲಸವನ್ನು ಮಾಡಿದ್ದಾರೆ. ಅವರು ನೀಡಿದ ವ್ಯವಸ್ಥೆಯನ್ನು ಭದ್ರವಾಗಿರಿಸುವ, ಇನ್ನಷ್ಟು ಸದೃಢಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

‘ಬಿಫೋರ್ ಮೆಮೊರಿ ಫೇಲ್ಸ್’ ಎಂಬ ಫಾಲಿ ನಾರಿಮನ್ ಅವರ ಕೃತಿಯನ್ನು ಎಲ್ಲ ಕಾನೂನು ವಿದ್ಯಾರ್ಥಿಗಳು ಓದಬೇಕು. ಅಲ್ಲಿ ಅತ್ಯಮೂಲ್ಯ ಪಾಠಗಳಿವೆ. ವಕೀಲ ವೃತ್ತಿ 20–20, ಏಕ ದಿನ ಪಂದ್ಯದಂತಲ್ಲ.‌ ಇದು ಟೆಸ್ಟ್‌ ಕ್ರಿಕೆಟ್‌ನಂತೆ ದೀರ್ಘವಾದ ಇನ್ನಿಂಗ್ಸ್ ಹೊಂದಿರುತ್ತದೆ. ಇಲ್ಲಿ ಯಶಸ್ಸನ್ನು ಹೊಂದಲು ತಾಳ್ಮೆ, ನಿರಂತರ ಪರಿಶ್ರಮ ಅಗತ್ಯ’ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲೆ ಎನ್.ವಾಣಿಶ್ರೀ, ಪ್ರೊ.ಪಿ.ಶಿವಾನಂದಭಾರತಿ ಹಾಜರಿದ್ದರು.

16 ವಿದ್ಯಾರ್ಥಿಗಳಿಗೆ ರ‌್ಯಾಂಕ್; ಸಂಭ್ರಮ

ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ ವಿವಿಧ ವಿಭಾಗಗಳ 16 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದು ಸಂಭ್ರಮಿಸಿದರು. ಬಿಎ ಎಲ್‌ಎಲ್‌ಬಿಯ 38 ವಿದ್ಯಾರ್ಥಿಗಳು ಬಿಬಿಎ ಎಲ್‌ಎಲ್‌ಬಿಯಲ್ಲಿ 45 ಎಲ್‌ಎಲ್‌ಬಿಯಲ್ಲಿ 41 ಮತ್ತು ಎಲ್‌ಎಲ್‌ಎಂನ 7 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು.  ರ್‍ಯಾಂಕ್‌ ವಿಜೇತರು: ಬಿಎ ಎಲ್‌ಎಲ್‌ಬಿ ವಿಭಾಗದ ಹೇಮಿಕಾ ಪೊನ್ನಮ್ಮ ಅಮೂಲ್ಯ ಎನ್‌.ಪ್ರಸಾದ್ ಸಿ‌.ಶಿಫಾಲಿ ಮುತ್ತಪ್ಪ ನಿಖಿತಾ ಸೂಸನ್ ಇಯಪನ್ ಬಿಬಿಎ ಎಲ್‌ಎಲ್‌ಬಿ ವಿಭಾಗದ ಅನಘಾ ಕೆ.ಭಾರದ್ವಾಜ್ ಎ.ಎಸ್.ಅಕ್ಷತಾ ಪಿ.ಡಿ.ದೀಪ್ತಿ ಎನ್.ಅನನ್ಯಾ ಯು.ಜೆ.ಶೀತಲ್ ಎಲ್‌ಎಲ್‌ಬಿ ವಿಭಾಗದ ಮರಿಯಾ ಖಾನ್ ಆರ್.ನಯನಿತಾ ಶಾರ್ವರಿ ಎಸ್.ಭಟ್ ಎಂ.ಎನ್.ನಾಗಲಕ್ಷ್ಮಿ ಎಚ್.ಆರ್.ಶಾಶ್ವತಿ ಸುಮನ್ ಪುರೋಹಿತ್ ಎಲ್ಎಲ್ಎಂ ವಿಭಾಗದಲ್ಲಿ ಎಸ್‌.ಎಂ.ಅನಿಲ್ ಅವರು ರ‌್ಯಾಂಕ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.