ಮೈಸೂರು: ಪ್ರತ್ಯೇಕ ವಿಷಯಗಳನ್ನಿರಿಸಿಕೊಂಡು ಗ್ರಾಮ ಪಂಚಾಯಿತಿ ನೌಕರರು, ಸಣ್ಣ ವ್ಯಾಪಾರಿಗಳು ಹಾಗೂ ಕಾಂಗ್ರೆಸ್ನ ಮಹಿಳಾ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮುಂದೆ ಸೇರಿದ ಗ್ರಾಮ ಪಂಚಾಯಿತಿ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಹಲವು ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ. ಸಂಬಳ ಇಲ್ಲದೇ ನೌಕರರು ಪರದಾಡುತ್ತಿದ್ದಾರೆ. ಕೂಡಲೇ, ಎಲ್ಲ ನೌಕರರಿಗೂ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ನೌಕರರು ಶ್ರೀಮಂತರಲ್ಲ. ಇವರ ಬಳಿ ಇರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಬಾರದು. ಪಿಂಚಣಿ, ‘ಗ್ರಾಚ್ಯೂಟಿ’ ಹಣವನ್ನು ನೀಡಬೇಕು. ಬಡ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಣ್ಣ ವ್ಯಾಪಾರಿಗಳ ರಕ್ಷಣೆಗೆ ಆಗ್ರಹ
‘ಆನ್ಲೈನ್’ ವಹಿವಾಟಿನ ಕರಾಳ ಸ್ವರೂಪದಿಂದಾಗಿ ಸಣ್ಣ ವ್ಯಾಪಾರಿಗಳು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೂಡಲೇ ಅವರನ್ನು ರಕ್ಷಿಸಬೇಕು ಎಂದು ಸಣ್ಣ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.
ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂದಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೈಸೂರು ಜಿಲ್ಲಾ ವಿತರಕರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆನ್ಲೈನ್ ಕಂಪನಿಗಳ ಅಸಂಬದ್ಧವಾದ ರಿಯಾಯಿತಿಗಳನ್ನು ತಡೆಯಲು ನಿಯಮ ರೂಪಿಸಬೇಕು, ಒಂದೇ ದೇಶ ಒಂದೇ ಬೆಲೆ ನೀತಿಯನ್ನು ಜಾರಿಗೊಳಿಸಬೇಕು, ವ್ಯಾಪಾರಸ್ಥರಿಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಪ್ರತಿಭಟನೆಗೆ ಮೈಸೂರು ಸೂಪರ್ ಮಾರ್ಕೆಟ್ಸ್, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು, ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧ ಮಾರಾಟಗಾರರ ಸಂಘ, ಮೈಸೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಕೆಎಫ್ಡಿಡಬ್ಲ್ಯೂಎ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಬೆಂಬಲ ನೀಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.