ಹನಗೋಡು: ಹೋಬಳಿಯ ಚಂದನಗಿರಿ ರಸ್ತೆ ಹಂದಿಹಳ್ಳದ ಬಳಿ ಮೇಯುತ್ತಿದ್ದ ಕುರಿ ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿದೆ.
ನಾಗರಹೊಳೆ ಉದ್ಯಾನದಂಚಿನ ಹಂದಿಹಳ್ಳದ ಬಳಿ ಭಾನುವಾರ ನೇರಳಕುಪ್ಪೆ ಗ್ರಾಮದ ಶಿವರಾಜು ಕುರಿಗಳನ್ನು ಮೇಯಿಸುತ್ತಿದ್ದರು. ಆ ವೇಳೆ ಹುಲಿಯು ಕುರಿ ಮಂದೆಯ ಮೇಲೆರಗಿ ಒಂದು ಕುರಿಯನ್ನು ಕೊಂದು ಹಾಕಿದೆ. ಹುಲಿ ಕಂಡ ಕುರಿಗಾಹಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದರಿಂದ ಕುರಿಯನ್ನು ಅಲ್ಲೇ ಬಿಟ್ಟು ಹುಲಿ ಪರಾರಿಯಾಗಿದೆ. ಡಿ.ಆರ್.ಎಫ್.ಒ ವೀರಭದ್ರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎರಡು ದಿನಗಳ ಹಿಂದೆ ಕೂಡ ಹುಲಿಯು ಚಂದನಗಿರಿಯಲ್ಲಿ ಮೇಕೆಯೊಂದನ್ನು ಕೊಂದು ಹಾಕಿತ್ತು. ಈ ಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವುದರಿಂದ ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ. ಕೂಡಲೇ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.