ಮೈಸೂರು: ಕಾರೊಂದರಲ್ಲಿ ಹುಲಿ ಚರ್ಮವನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದು, 3.15 ಮೀಟರ್ ಉದ್ದದ ಹುಲಿ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಸಂತೇಮಾಳದ ನಿವಾಸಿಗಳಾದ ಆಕಾಶ್ ರಾವ್ (23) ಹಾಗೂ ವಿಷ್ಣು (24) ಬಂಧಿತರು.
ಹುಲಿ ಚರ್ಮ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಡಿಸಿಎಫ್ ಎ.ಟಿ.ಪೂವಯ್ಯ ನೇತೃತ್ವದ ತಂಡವು ದಾಳಿಗೆ ಹೊಂಚು ಹಾಕಿತ್ತು. ಇದೇ ವೇಳೆ ಕೆಆರ್ಎಸ್ ಕಡೆಯಿಂದ ಮೈಸೂರು ನಗರಕ್ಕೆ ಬರುತ್ತಿದ್ದ ಕೆಂಪು ಬಣ್ಣದ ಕಾರನ್ನು ತಡೆದು ಪರಿಶೀಲಿಸಿದಾಗ ಹುಲಿಯ ಚರ್ಮ ಪತ್ತೆಯಾಗಿದೆ. ಮೇಲ್ನೋಟಕ್ಕೆ, ಈ ಚರ್ಮವು ಹಲವು ವರ್ಷಗಳಷ್ಟು ಹಳೆಯದ್ದು ಎಂದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರ ಅಕ್ಟೋಬರ್ನಲ್ಲಿ ಇಲ್ಲಿಗೆ ಸಮೀಪದ ಇಲವಾಲ ಬಳಿ, ಹುಲಿ ಚರ್ಮ ಮಾರಲು ಯತ್ನಿಸಿದ ಪಿರಿಯಾಪಟ್ಟಣ ತಾಲ್ಲೂಕಿನ ವ್ಯಕ್ತಿಯೊಬ್ಬನನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.