ADVERTISEMENT

ಮೈಸೂರು: ಮಳೆಗೆ ನೆಲಕ್ಕೊರಗಿದ ಮರ; ಭರದಿಂದ ಸಾಗಿದೆ ಮರಗಳ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 9:29 IST
Last Updated 24 ಮೇ 2019, 9:29 IST
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ನೆಲಕ್ಕುರುಳಿದ್ದ ಮರದ ಕೊಂಬೆಗಳನ್ನು ಮೈಸೂರು ಮಹಾನಗರಪಾಲಿಕೆಯ ‘ಅಭಯ್’ ತಂಡ ತೆರವುಗೊಳಿಸುತ್ತಿರುವುದು
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ ನೆಲಕ್ಕುರುಳಿದ್ದ ಮರದ ಕೊಂಬೆಗಳನ್ನು ಮೈಸೂರು ಮಹಾನಗರಪಾಲಿಕೆಯ ‘ಅಭಯ್’ ತಂಡ ತೆರವುಗೊಳಿಸುತ್ತಿರುವುದು   

ಮೈಸೂರು: ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ನಗರದಲ್ಲಿ 50ಕ್ಕೂ ಹೆಚ್ಚು ಮರ, 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ನಗರಪಾಲಿಕೆ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವತಿಯಿಂದ ಶುಕ್ರವಾರ ತೆರವು ಕಾರ್ಯಾಚರಣೆ ಭರದಿಂದ ಸಾಗಿತು.

ನಗರಪಾಲಿಕೆಯ ‘ಅಭಯ’ ತಂಡವನ್ನು ಬಳಸಿಕೊಂಡು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಚ್ಚುವರಿಯಾಗಿ ಹೊರಗಿನ ಕೆಲಸಗಾರರನ್ನೂ ಬಳಸಿಕೊಳ್ಳಲಾಗಿದೆ. ಹಲವು ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಸರಿಪಡಿಸುವುದನ್ನು ಆದ್ಯತೆಯಾಗಿ ಸ್ವೀಕರಿಸಲಾಗಿದೆ ಎಂದು ನಗರ‍ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಸದಾಶಿವ ಕೆ.ಚೆಟ್ನಿ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ಒಣಗಿದ ಕೊಂಬೆಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯದೆ. ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿವುದು ಸೂಕ್ತವಾಗಿದೆ. ಅರಣ್ಯ ಇಲಾಖೆಯ ಅನುಮತಿಯನ್ನು ಇದಕ್ಕಾಗಿ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ತೆರವು ಕಾರ್ಯಾಚರಣೆಗೆ ‘ಶಕ್ತಿಮಾನ್‌’ ಸಾಧನ ಬಳಸಲಾಗಿದೆ. ಜೆಸಿಬಿ ಸಾಧನ ಬಳಸಿ ವಿದ್ಯುತ್‌ ಕಂಬ ತೆರವುಗೊಳಿಸಲಾಗುತ್ತಿದೆ. ನಗರಪಾಲಿಕೆ ಬಳಿ ಮರ ಕತ್ತರಿಸುವುದಕ್ಕಾಗಿ ಎರಡು ವಾಹನಗಳಿವೆ. ಹೆಚ್ಚುವರಿಯಾಗಿ ಎರಡು ವಾಹನ ನೀಡುವಂತೆ ಆಯುಕ್ತರಾದ ಶಿಲ್ಪಾ ನಾಗ್‌ ಅವರಿಗೆ ಮನವಿ ಮಾಡಿದ್ದೇವೆ’ ಎಂದು ಭರವಸೆ ನೀಡಿದರು.

ಗುರುವಾರ ಸುರಿದ ಮಳೆಗೆ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.