ಮೈಸೂರು: ಇಲ್ಲಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಳಿತಾಯ ಖಾತೆಯಲ್ಲಿರುವ ₹ 6.90 ಅನುದಾನವನ್ನು ಇದುವರೆಗೂ ಬಳಸಿಲ್ಲದಿರುವುದು ಬಹಿರಂಗಗೊಂಡಿದೆ.
ಸಂಸ್ಥೆಯಲ್ಲಿ ಸೋಮವಾರ ನಡೆದ 12 ಅರಣ್ಯ ಆಧಾರಿತ ಮೂಲ ಆದಿವಾಸಿಗಳ ಪ್ರತಿನಿಧಿಗಳ ಸಭೆಯಲ್ಲಿ ಉಪನಿರ್ದೇಶಕಿ ಪ್ರಭಾ ಅರಸು ಈ ಮಾಹಿತಿ ನೀಡಿದರು. ‘ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಸಂಸ್ಥೆಗೆ 60ಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳ ಮಾಹಿತಿ ಪಡೆದರು. ಕೈಗೊಂಡ ಯೋಜನೆಗಳು ಹಾಗೂ ಅಧ್ಯಯನದಿಂದ ಸಮುದಾಯಗಳಿಗೆ ಆಗುತ್ತಿರುವ ಉಪಯೋಗಗಳೇನು ಎಂಬ ಬಗ್ಗೆ ಚರ್ಚಿಸಿದರು.
‘ನಮ್ಮ ಹಾಡಿಯಲ್ಲಿ ಈವರೆಗೂ ಮೂಲಸೌಲಭ್ಯಗಳನ್ನು ಕಲ್ಪಿಸಿಲ್ಲ. ಇಂದಿಗೂ ಸಮರ್ಪಕ ಕುಡಿಯುವ ನೀರು, ರಸ್ತೆ ಇಲ್ಲ. ಮನೆಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅಧಿಕಾರಿಗಳು ಸರಿಯಾಗಿ ಹಾಡಿಗಳಿಗೆ ಭೇಟಿ ನೀಡುತ್ತಿಲ್ಲ. ಕೇವಲ ಶಾಲೆಗಳಿಗೆ ಬಂದು ಹೋಗುತ್ತಾರಷ್ಟೆ’ ಎಂದು ಎಚ್.ಡಿ. ಕೋಟೆ ತಾಲ್ಲೂಕು ನಾಗಪುರ ಹಾಡಿಯ ಮುಖಂಡರು ದೂರಿದರು.
ತಲುಪಿಯೇ ಇಲ್ಲ:
‘ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದಲೇ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ ಎನ್ನುತ್ತೀರಿ. ಆದರೆ, ನಮಗೆ ತಲುಪಿಯೇ ಇಲ್ಲ. ಹಣ ಖರ್ಚು ಮಾಡಲೆಂದು ಶಿಬಿರ ಆಯೋಜಿಸಬಾರದು. ಸಮುದಾಯದ ಸಹಭಾಗಿತ್ವದೊಂದಿಗೆ ನಡೆಸಬೇಕು’ ಎಂದು ಕೋರಿದರು.
‘ಬೆಟ್ಟ ಕುರುಬರ ಪಾರಂಪರಿಕ ದೈವಾರಾಧನೆ ಮತ್ತು ಸಂಸ್ಕೃತಿ ಉಳಿಸಿಕೊಳ್ಳಲು ಅಗತ್ಯವಿರುವ ಅಂಬಾಲಗಳನ್ನು ಅಭಿವೃದ್ಧಿಪಡಿಸಬೇಕು. ಇವುಗಳ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಕಳೆದ ಬಾರಿ ಬಜೆಟ್ನಲ್ಲಿ ಘೋಷಿಸಿದಂತೆ 12 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ವಿಶೇಷ ನೇರ ನೇಮಕಾತಿ ಸಂಬಂಧ ಸರ್ಕಾರ ಕೂಡಲೇ ಆದಿವಾಸಿಗಳ ಪ್ರಮುಖರು ಮತ್ತು ಅಧಿಕಾರಿಗಳ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.
ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಕೃಷ್ಣಮೂರ್ತಿ ಕೆ.ವಿ. ಇದ್ದರು.
ಸರ್ಕಾರ ಗಮನಹರಿಸಲಿ...
‘ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯಲ್ಲಿ ಪಡಿತರಚೀಟಿ ಕಡ್ಡಾಯ ಮಾಡಿದ್ದರಿಂದ ಆದಿವಾಸಿಗಳು ಹೊರಗೆ ಉಳಿಯುವಂತಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು’ ಎಂದು ಕೋರಿದರು. ‘ಆದಿವಾಸಿಗಳ ಮೊದಲ ತಲೆಮಾರಿನ ವಿದ್ಯಾವಂತರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಆದಿವಾಸಿಗಳ ಪಾರಂಪರಿಕ ಕೌಶಲದ ಬಗ್ಗೆ ವಿಶೇಷ ತರಬೇತಿ ನೀಡಬೇಕು. ಪ್ರತಿ ಅರಣ್ಯ ಆಧಾರಿತ ಪಾರಂಪರಿಕ ಬುಡಕಟ್ಟು ಸಮುದಾಯಗಳಿಗೆ ಅವರದೇ ಆದ ವಿಶಿಷ್ಟ ವಿನ್ಯಾಸದಂತೆ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಅವರ ನ್ಯಾಯ ಪದ್ಧತಿ ದಾಖಲಿಸುವ ಕೆಲಸವಾಗಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.