ADVERTISEMENT

ಇತಿಹಾಸ ವ್ಯಾಖ್ಯಾನ–ಎರಡು ರೀತಿ ಅತಿರೇಕ: ಲೇಖಕ ಅಮಿಶ್‌ ತ್ರಿಪಾಠಿ

ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ಲೇಖಕ ಅಮಿಶ್‌ ತ್ರಿಪಾಠಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 8:37 IST
Last Updated 6 ಸೆಪ್ಟೆಂಬರ್ 2020, 8:37 IST
ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷೆ ಶುಭಾ ಸಂಜಯ್‌ ಅರಸ್‌, ಲೇಖಕರಾದ ಶೋಭಾ ನಾರಾಯಣನ್‌ ಹಾಗೂ ಅಮಿತ್‌ ತ್ರಿಪಾಠಿ ಭಾಗಿ
ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷೆ ಶುಭಾ ಸಂಜಯ್‌ ಅರಸ್‌, ಲೇಖಕರಾದ ಶೋಭಾ ನಾರಾಯಣನ್‌ ಹಾಗೂ ಅಮಿತ್‌ ತ್ರಿಪಾಠಿ ಭಾಗಿ   

ಮೈಸೂರು: ಇತಿಹಾಸದ ವ್ಯಾಖ್ಯಾನದಲ್ಲಿ ಎರಡು ರೀತಿಯ ಅತಿರೇಕಗಳನ್ನು ಕಾಣಬಹುದಾಗಿದ್ದು, ಇದು ದುರದೃಷ್ಟಕರ ವಿಚಾರ ಎಂದು ಲೇಖಕ ಅಮಿಶ್‌ ತ್ರಿಪಾಠಿ ತಿಳಿಸಿದರು.

ಮೈಸೂರು ಲಿಟರರಿ ಫೋರಂ ಚಾರಿಟಬಲ್‌ ಟ್ರಸ್ಟ್‌ ಹಾಗೂ ಮೈಸೂರು ಬುಕ್‌ ಕ್ಲಬ್ಸ್‌–2015 ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ‘ಮೈಸೂರು ಸಾಹಿತ್ಯ ಸಂಭ್ರಮ–2020’ ಆನ್‌ಲೈನ್‌ (ವರ್ಚುವಲ್‌ ಸರಣಿ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲೇಖಕಿ ಶೋಭಾ ನಾರಾಯಣನ್‌ ಸಂವಾದ ನಡೆಸಿಕೊಟ್ಟರು.

ತಾವು ಬರೆದಿರುವ ‘ಸುಹೇಲ್‌ದೇವ್‌: ಸೈಲೆಂಟ್‌ ಹೀರೊ ಆಫ್‌ ಹಿಸ್ಟರಿ’ ಕೃತಿ ಬಗ್ಗೆ ಲಂಡನ್‌ನಿಂದ ಮಾತನಾಡಿದ ಅಮಿಶ್‌, ‘ವಿದೇಶಿ ಆಕ್ರಮಣಕಾರರ ದಾಳಿ ಹಾಗೂ ಅವರಿಂದ ಉಂಟಾದ ಹಾನಿ ಬಗ್ಗೆ ಒಂದು ಪಂಗಡ ಮುಕ್ತವಾಗಿ ಮಾತನಾಡಲು ಸಿದ್ಧವಿಲ್ಲ. ಖ್ಯಾತ ಸಂಗೀತಗಾರರು, ಕಲಾವಿದರು, ಲೇಖಕರು ಎಂಬುದಾಗಿ ಅವರನ್ನು ಬಿಂಬಿಸುತ್ತಿದೆ. ವಿದೇಶಿ ಆಕ್ರಮಣಕಾರರು ಮಾಡಿದ ಅಪರಾಧಗಳಿಗಾಗಿ ಮತ್ತೊಂದು ಪಂಗಡವು ಈಗಿನ ಪೀಳಿಗೆಯವರು, ಸಹ ಭಾರತೀಯರನ್ನು ದೂಷಿಸುತ್ತಿದೆ. ಬಹಳ ಹಿಂದಿನ ಆ ಅಪರಾಧಕ್ಕೂ ಈಗಿನ ಪೀಳಿಗೆಗೆ ಸಂಬಂಧವಿಲ್ಲದಿದ್ದರೂ ವಿಷಕಾರುತ್ತಿದೆ. ಹೀಗಾಗಿ, ಸತ್ಯ ಹೇಳುವುದು ಅಗತ್ಯವಾಗಿದೆ’ ಎಂದರು.

ADVERTISEMENT

ಭಾರತದ ಧರ್ಮಗ್ರಂಥ ಹಾಗೂ ಇತಿಹಾಸದಲ್ಲಿ ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಬಗೆಗಿನ ಪ್ರಶ್ನೆಗೆ, ‘ಜ್ಞಾನದಲ್ಲಿ ಹಾಗೂ ಯುದ್ಧದಲ್ಲಿ ಕೌಶಲ ಹೊಂದಿದ್ದ ಹಲವಾರು ಮಹಿಳೆಯರು ಇದ್ದರು. ಅತ್ಯುತ್ತಮ ತೀರ್ಮಾನ ಕೈಗೊಳ್ಳುವ ರಾಣಿಯರೂ ಇದ್ದರು. ವೇದವನ್ನು ಕಲಿತಿದ್ದು ಮಾತ್ರವಲ್ಲ; ತಮ್ಮ ಕೊಡುಗೆಯನ್ನೂ ನೀಡಿದ್ದರು. ಆದರೆ, ಸತ್ಯಕ್ಕಿಂತ ಅರ್ಧ ಸತ್ಯವೇ ಹೆಚ್ಚು ಪ್ರಚಾರ ಪಡೆಯಿತು. ಚೋಳರ ಸಾಮ್ರಾಜ್ಯದಲ್ಲಿ ಮಹಿಳಾ ರೆಜಿಮೆಂಟ್‌ ಕೂಡ ಇತ್ತು’ ಎಂದು ಹೇಳಿದರು.

ಮಹಿಳೆ ವಿರುದ್ಧ ಪಕ್ಷಪಾತ ಧೋರಣೆ ತಪ್ಪು ಎಂಬುದಾದರೆ, ಪುರುಷರ ವಿರುದ್ಧದ ಪಕ್ಷಪಾತ ಧೋರಣೆಯೂ ತಪ್ಪು ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.