ಮೈಸೂರು: ಇಲ್ಲಿನ ಎಲೆತೋಟದ ಸಮೀಪ ಇಬ್ಬರು ವ್ಯಕ್ತಿಗಳನ್ನು ದುಷ್ಕರ್ಮಿಗಳ ಗುಂಪೊಂದು ಭಾನುವಾರ ತಡರಾತ್ರಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ.
ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ (29) ಮತ್ತು ಕಿಶನ್ (29) ಕೊಲೆಗೀಡಾದವರು. ಇವರ ಜತೆ ಇದ್ದ ಮಧು ಎಂಬುವವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮುಂಡಿಬೆಟ್ಟದ ಪಾದದ ಬಳಿ ಇದ್ದ ಜಾಗದ ಕುರಿತು ಕಿರಣ್ಗೂ, ಸ್ವಾಮಿ ಮತ್ತು ಶಿವು ಎಂಬುವವರಿಗೂ ಮೊದಲಿನಿಂದಲೂ ವೈಮನಸ್ಯ ಇತ್ತು. ಇದೇ ವಿಚಾರವಾಗಿ ಮಾತನಾಡಲು ಎಂದು ಎರಡು ಗುಂಪುಗಳು ಚಾಮುಂಡಿಪುರಂ ವೃತ್ತದಿಂದ ಊಟಿ ರಸ್ತೆಗೆ ಹೋಗುವ ಮಾರ್ಗ ಮಧ್ಯೆದ ಎಲೆತೋಟದ ಸಮೀಪ ಸೇರಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಾಮಿ, ಶಿವು ಹಾಗೂ ಇತರ ಇಬ್ಬರು ರಾತ್ರಿ 11.30ರ ಸಮಯದಲ್ಲಿ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ರಾತ್ರಿ ಡಿಸಿಪಿ ಡಾ.ಎ.ಎನ್. ಪ್ರಕಾಶ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಕೊಲೆಗೀಡಾದವರ ಪೈಕಿ ಕಿರಣ್ ಮೇಲೆ ಈಗಾಗಲೇ ರೌಡಿಶೀಟ್ತೆರೆಯಲಾಗಿತ್ತು. ಕೊಲೆಗೀಡಾದ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಡಿಸಿಪಿ ಪ್ರಕಾಶ್ಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.