ADVERTISEMENT

ಉ.ಪ್ರ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ: ಕಾಂಗ್ರೆಸ್ ಮುಖಂಡ ದೇವರಾಜ್

ಉತ್ತರಪ್ರದೇಶ ಘಟನೆ ತಲೆತಗ್ಗಿಸುವ ಸಂಗತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 2:19 IST
Last Updated 6 ಅಕ್ಟೋಬರ್ 2020, 2:19 IST
ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಕಾಂಗ್ರೆಸ್, ದಸಂಸ ಮತ್ತು ವಾಲ್ಮೀಕಿ ಸಮುದಾಯದಿಂದ ಉತ್ತರ ಪ್ರದೇಶದ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು
ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಕಾಂಗ್ರೆಸ್, ದಸಂಸ ಮತ್ತು ವಾಲ್ಮೀಕಿ ಸಮುದಾಯದಿಂದ ಉತ್ತರ ಪ್ರದೇಶದ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು   

ಹುಣಸೂರು: ಉತ್ತರ ಪ್ರದೇಶದಲ್ಲಿ ನಡೆದ ಅಮಾನವೀಯ ಘಟನೆಯನ್ನು ಅಲ್ಲಿನ ಮುಖ್ಯಮಂತ್ರಿಗಳು ಹಗುರವಾಗಿ ಪರಿಗಣಿಸಿರುವುದು ತಲೆ ತಗ್ಗಿಸುವ ಸಂಗತಿ ಎಂದು ಕಾಂಗ್ರೆಸ್ ಮುಖಂಡ ದೇವರಾಜ್ ಹೇಳಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ದಸಂಸ, ಕಾಂಗ್ರೆಸ್ ಮತ್ತು ತಾಲ್ಲೂಕು ವಾಲ್ಮೀಕಿ ಸಮುದಾಯದ ಸಂಘದವರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಹಾಥರಸ್ ಜಿಲ್ಲೆಯಲ್ಲಿ ಅಮಾನವೀಯವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರೂ ಆರೋಪಿಗಳ ಪರವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬ್ಯಾಟಿಂಗ್ ಮಾಡುತ್ತಿರುವುದು ಬಿಜೆಪಿ ಮಹಿಳೆಯರಿಗೆ ನೀಡುವ ರಕ್ಷಣೆ ಹಾಗೂ ಗೌರವ ಕಾಣಿಸುತ್ತಿದೆ’ ಎಂದರು.

ADVERTISEMENT

ದಸಂಸ ಮುಖಂಡ ರತ್ನಾಪುರಿ ಪುಟ್ಟಸ್ವಾಮಿ ಮಾತನಾಡಿ, ‘ಉತ್ತರಪ್ರದೇಶದಲ್ಲಿ ಕಾನೂನು ಬಾಹಿತ ಚಟುವಟಿಕೆ ನಡೆಸುತ್ತಿರುವ ಕ್ರಿಮಿನಲ್‌ಗಳಿಗೆ ಆಶ್ರಯ ತಾಣವಾಗಿದ್ದು, ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದು ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕು’ ಎಂದರು.

‘ಉತ್ತರಪ್ರದೇಶದಲ್ಲಿ ಪರಿಶಿಷ್ಟ, ಅಲ್ಪಸಂಖ್ಯಾತ ಮಹಿಳೆಯರು ಭಯಮುಕ್ತವಾಗಿ ಬದುಕುವ ವಾತಾವರಣ ಸೃಷ್ಟಿಯಾಗಬೇಕಾದರೆ ಆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ಅಸ್ವಾಳು ಕೆಂಪೇಗೌಡ ಹೇಳಿದರು.

ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವುದರಿಂದ ಇತರರು ಎಚ್ಚೆತ್ತುಕೊಳ್ಳಲಿದ್ದಾರೆ. ಈ ದಿಕ್ಕಿನಲ್ಲಿ ನ್ಯಾಯಾಲಯ ಗಂಭೀರವಾಗಿ ಚಿಂತನೆ ನಡೆಸಿ ನ್ಯಾಯ ನೀಡಬೇಕು ಎಂದು ದಸಂಸ ಮುಖಂಡ ಡೇವಿಡ್ ರತ್ನಾಪುರಿ ಹೇಳಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಭಾಗ್ಯಮ್ಮ, ಶಿವಕುಮಾರ್, ಹರೀಶ್‌, ಕಾಂಗ್ರೆಸ್ ಮುಖಂಡರಾದ ಜಿ.ಪಂ. ಸದಸ್ಯ ಕಟ್ಟನಾಯಕ, ಶ್ರೀನಿವಾಸ್‌, ರಘು, ಕುಮಾರ್‌, ಪುರಸಭೆ ಮಾಜಿ ಅಧ್ಯಕ್ಷ ರಮೇಶ್, ಮಧು ಮತ್ತು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.