ಬೆಂಗಳೂರು:ಮೈಸೂರು ಚಾಮುಂಡಿ ತಾಯಿ ದರ್ಶನ ಪಡೆದು ನಟ ಉಪೇಂದ್ರ ಅವರು ಮಂಗಳವಾರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಪ್ರಚಾರ ಆರಂಭಿಸಿದರು.
ಸೋಮವಾರ ಮದ್ದೂರಿನಲ್ಲಿ ಶಿವಪುರದ ಧ್ವಜಸತ್ಯಾಗ್ರಹ ಸೌಧಕ್ಕೆ ಭೇಟಿ ನೀಡಿ,ಅಲ್ಲಿಂದ ಮೆರವಣಿಗೆಯ ಮೂಲಕ ಹೊಳೇ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
‘ಮಂಡ್ಯ ಇಡೀ ಇಂಡಿಯಾದಲ್ಲಿಯೇ ರಾಜಕೀಯವಾಗಿ ವಿಶಿಷ್ಟತೆಯನ್ನು ಪಡೆದಿದೆ. ಆದ್ದರಿಂದ ಇಲ್ಲಿಂದಲೇ ಲೋಕಸಭಾ ಪ್ರಚಾರ ಕಾರ್ಯವನ್ನು ಆರಂಭ ಮಾಡುತ್ತೇನೆ‘ ಎಂದು ಆ ವೇಳೆ ತಿಳಿಸಿದರು.
ರಾಜ್ಯದಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮಂಡ್ಯದಿಂದ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕೈಗೊಂಡಿರುವುದಾಗಿ ಹೇಳಿದರು.
ಮಂಡ್ಯದಲ್ಲಿ ಈಗಾಗಲೇ ಹಲವಾರು ನಾಯಕ ನಟರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರಲ್ಲದೆ ಜೆಡಿಎಸ್ನಿಂದ ನಾಯಕ ನಟರೊಬ್ಬರು ಸ್ಪರ್ಧಿಸಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರವರ ಪಕ್ಷಕ್ಕೆ ಸಂಬಂಧಪಟ್ಟಂತೆ ಅವರು ಪ್ರಚಾರದಲ್ಲಿ ತೊಡಗುತ್ತಾರೆ. ನಾನು ನನ್ನ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದರು.
‘ನಮ್ಮ ಪಕ್ಷ ಸತ್ಯ, ನಿಷ್ಠೆ ಇಟ್ಟುಕೊಂಡಿದೆ ರಾಜ ಎಂದರೆ ಆರ್ಭಟ, ಪ್ರಜೆ ಎಂದರೆ ಮೌನ ಅಲ್ಲ ಇದರಲ್ಲಿ ಬದಲಾವಣೆ ತಂದು ಪ್ರಜೆಯೇ ರಾಜನಾಗುವಂತೆ ಮಾಡುವುದೇ ನಮ್ಮ ಪಕ್ಷದ ಸಿದ್ಧಾಂತವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಮುನ್ನಡೆಸುವ ಅಭಿಲಾಷೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.