ADVERTISEMENT

ಮೈನವಿರೇಳಿಸಿದ ವಜ್ರಮುಷ್ಟಿ ಕಾಳಗ

ಜಟ್ಟಿಗಳ ತಲೆಯಿಂದ ಚಿಮ್ಮಿದ ರಕ್ತ l ಮೊಳಗಿದ ‘ಕಾಯೌ ಶ್ರೀ ಗೌರಿ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:49 IST
Last Updated 3 ಅಕ್ಟೋಬರ್ 2025, 4:49 IST

ಮೈಸೂರು: ಅಂಬಾವಿಲಾಸ ಅರಮನೆಯ ಸವಾರಿ ತೊಟ್ಟಿಯಲ್ಲಿ ವಿಜಯದಶಮಿ ಪ್ರಯುಕ್ತ ಗುರುವಾರ ನಡೆದ ಜಟ್ಟಿಗಳ ವಜ್ರಮುಷ್ಟಿ ಕಾಳಗ‌ ನೋಡುಗರ ಮೈ ನವಿರೇಳಿಸಿತು.

ರಾಜವಂಶಸ್ಥರ ವಿಜಯದಶಮಿ ಪೂಜೆ ಹಾಗೂ ವಿಜಯಯಾತ್ರೆಗೂ ಮೊದಲು ನಡೆಯುವ ಈ ಸಾಂಪ್ರದಾಯಿಕ ಕಾಳಗಕ್ಕೆ ರಾಜವಂಶಸ್ಥರು, ಸಂಬಂಧಿಗಳು ಸಾಕ್ಷಿಯಾದರು.

ವರಾಹಸ್ವಾಮಿ ದೇವಾಲಯದಲ್ಲಿ ಮೈಸೂರಿನ ಮಂಜುನಾಥ್ ಜಟ್ಟಿ, ಬೆಂಗಳೂರಿನ ಪ್ರದ್ಯುಮ್ನ ಜಟ್ಟಿ, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಹಾಗೂ ಚಾಮರಾಜನಗರದ ಮಹೇಶ್ ಜಟ್ಟಿ ಅವರಿಗೆ ತಿಲಕವಿಟ್ಟು ಮೈಗೆ ಕೆಂಪು ಮಣ್ಣಿನ ‘ಮುಸ್ತಿಫ್’ ಬಳಿಯಲಾಯಿತು. ಅವರ ಕೈಗೆಗಳಿಗೆ ಹೂವಿನ ಕಂಕಣ ಕಟ್ಟಲಾಗಿತ್ತು. ನಂತರ ಅವರನ್ನು ಅರಮನೆಯ ಸವಾರಿ ತೊಟ್ಟಿಗೆ ಬೆಳಿಗ್ಗೆ 10.40ಕ್ಕೆ ಕರೆತರಲಾಯಿತು. ಎರಡು ಜೋಡಿ ಕಟ್ಟಿ ಅಖಾಡಕ್ಕೆ ಇಳಿಯಿತು. ಇಡೀ ದೇಹಕ್ಕೆ ಕೆಂಪು ಮಣ್ಣು ಬಳಿದುಕೊಂಡಿದ್ದ ಜಟ್ಟಿಗಳು, ಕಾಳಗಕ್ಕೆ ಮದಗಜಗಳಂತೆ ಸಿದ್ಧಗೊಂಡಿದ್ದರು.

ADVERTISEMENT

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಟ್ಟದ ಕತ್ತಿಗೆ ಪೂಜೆ‌ ಸಲ್ಲಿಸುತ್ತಿದ್ದಂತೆ 10.52ಕ್ಕೆ ಕಾಳಗ ಆರಂಭವಾಯಿತು. ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ ಜಟ್ಟಿ ಅವರ ಶಿಷ್ಯ ರಾಘವೇಂದ್ರ ಜಟ್ಟಿ ಅವರು ಚಾಮರಾಜನಗರದ ಬಂಗಾರು ಜಟ್ಟಿ ಅವರ ಶಿಷ್ಯ ಮಹೇಶ್ ಜಟ್ಟಿ ಅವರ ತಲೆಭಾಗಕ್ಕೆ ವಜ್ರನಖದಿಂದ ಹೊಡೆದು ರಕ್ತ ಚಿಮ್ಮಿಸಿದರು. 15 ಸೆಕೆಂಡ್‌ನಲ್ಲಿ ಕಾಳಗ ಅಂತ್ಯಗೊಂಡಿತು.

ಐದಾರು ನಿಮಿಷ ಕಾಳಗ ನೋಡಲು ಕಾತರರಾಗಿದ್ದ ಜನರು ಕೆಲವೇ ಕ್ಷಣಗಳ ಹೋರಾಟವನ್ನು ಕಣ್ತುಂಬಿಕೊಂಡರು. ಯದುವೀರ‌ ಅವರು ವಿಜಯಯಾತ್ರೆಗೆ ಬರುತ್ತಿದ್ದಂತೆ ಜಟ್ಟಿ‌ ಜೋಡಿಗಳು ಶಿರಬಾಗಿ‌ ನಮಸ್ಕರಿಸಿದರು. ಅಂಬಾವಿಲಾಸ ಅರಮನೆ ಎದುರು ಚಿನ್ನದ ರಥಕ್ಕೆ ಪಟ್ಟದ ಕತ್ತಿ ತರುತ್ತಿದ್ದಂತೆ ಮೈಸೂರು ಸಂಸ್ಥಾನ ಗೀತೆ ‘ಕಾಯೌ ಶ್ರೀಗೌರಿ’ ಅನ್ನು ಅರಮನೆ ಬ್ಯಾಂಡ್ ಮೊಳಗಿಸಿತು.

ರೆಫರಿಯಾಗಿ ಮೈಸೂರಿನ ಉಸ್ತಾದ್‌ ಟೈಗಾರ್ ಬಾಲಾಜಿ ಜಟ್ಟಿ, ಚಾಮರಾಜನಗರದ ಉಸ್ತಾದ್‌ ಬಂಗಾರು ಜಟ್ಟಿ, ಚನ್ನಪಟ್ಟಣದ ಪುರುಷೋತ್ತಮ ಜಟ್ಟಿ ಪಾಲ್ಗೊಂಡಿದ್ದರು.

‘ಮೂರು ನಿಮಿಷ ವಜ್ರಮುಷ್ಟಿ ಕಾಳಗವು ನಡೆಯಿತು. ನಾಲ್ವರು ಜಟ್ಟಿಗಳು ಸಮನಾಗಿ ಹೋರಾಡಿದರು. ಇದು ಸೋಲು, ಗೆಲುವಿನ ಕಾಳಗವಲ್ಲ. ವಿಜಯದಶಮಿಯಂದು ನಾಡದೇವಿಗೆ ಸಂಪ್ರದಾಯದಂತೆ ರಕ್ತಾರ್ಪಣೆ ಸಲ್ಲಿಸಿ ತ್ಯಾಗ ಮಾಡುವುದಾಗಿದೆ’ ಎಂದು ಉಸ್ತಾದ್ ಬಾಲಾಜಿ ಜಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.