ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಚರಿತ್ರೆಯೇ ಹಠ ಮಾಡುವುದಾಗಿದೆ. ಅವರೊಬ್ಬ ಹಠವಾದಿ ಮಾತ್ರವಲ್ಲ ಮಾಯಾವಿಯೂ ಆಗಿದ್ದಾರೆ. ಬೆಳಿಗ್ಗೆ ರಾಕ್ಷಸ, ಸಂಜೆ ಅದ್ಭುತವಾಗಿ ಕಾಣಿಸುತ್ತಾರೆ, ರಾತ್ರಿ ಒಳ್ಳೆ ಡ್ಯಾನ್ಸರ್ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಭಾನುವಾರ ವ್ಯಂಗ್ಯವಾಡಿದರು.
ಬಸವಕಲ್ಯಾಣದಲ್ಲಿ 40 ಸಾವಿರ ಮರಾಠಿಗರಾಗಿದ್ದಾರೆ. ಇವರ ಮತ ಗಳಿಸಲು ಮರಾಠ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಆದರೆ, ಇವರು ಬಸವಣ್ಣನ ನಾಡನ್ನು ಉದ್ಧಾರ ಮಾಡಿಲ್ಲ. ತಾಳವಾಡಿ, ಕಾಸರಗೋಡು ಸೇರಿದಂತೆ ಇನ್ನಿತರ ಗಡಿಭಾಗದಲ್ಲಿರುವ ಕನ್ನಡಿಗರ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಹಾಕಲಿಲ್ಲ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಧಿಕಾರ ಕಳೆದುಕೊಳ್ಳುತ್ತಿರುವ ಯಡಿಯೂರಪ್ಪ ವೀರಶೈವ ಲಿಂಗಾಯತರನ್ನು ಓಬಿಸಿಗೆ ಸೇರಿಸುವ ನಾಟಕವಾಡುತ್ತಿದ್ದಾರೆ. ಇವರು ಇದುವರೆಗೂ ಶಿವಕುಮಾರಸ್ವಾಮೀಜಿ ಅವರಿಗೆ ಭಾರತ ರತ್ನ ಏಕೆ ಕೊಡಿಸಲಿಲ್ಲ, ಬಸವಣ್ಣನ ಪ್ರತಿಮೆ ಏಕೆ ನಿರ್ಮಿಸಲಿಲ್ಲ. ಯಾವ ಜಾತಿಯವರೂ ಇವರನ್ನು ನಂಬಬಾರದು ಎಂದು ಹೇಳಿದರು.
ಬಿಜೆಪಿಯಲ್ಲಿ ರೇಣುಕಾಚಾರ್ಯ ಹಾಗೂ ಬಸನಗೌಡ ಯತ್ನಾಳ್ ಅಷ್ಟೇ ಮಾತನಾಡುತ್ತಿದ್ದಾರೆ. ನಾಯಿಗಳ ಬೊಗಳುವಿಕೆಗೆ ಬೇಕಾದರೆ ಪ್ರತಿಕ್ರಿಯೆ ಕೊಡುವೆ, ಇವರ ಹೇಳಿಕೆಗಳಿಗೆ ಕೊಡುವುದಿಲ್ಲ. ವಾಟ್ಸ್ಆ್ಯಪ್ಗಳಲ್ಲಿ ಇವರ ಬಗ್ಗೆ ಬರುವ ಚಿತ್ರಗಳನ್ನು ನೋಡಿದರೆ ಥೂ ಎನಿಸುತ್ತದೆ ಎಂದು ಹೇಳಿದರು.
ಡಿ.5ರ ಕರ್ನಾಟಕ ಬಂದ್ಗೆ ಈಗಾಗಲೇ ಒಂದೂವರೆ ಸಾವಿರ ಸಂಘಟನೆಗಳು ಬೆಂಬಲ ನೀಡಿವೆ. ಕಾಂಗ್ರೆಸ್, ಜೆಡಿಎಸ್ ಸಹ ಕೊಡಬೇಕು.ಇಲ್ಲದಿದ್ದರೆಮುಂದಿನ ದಿನಗಳಲ್ಲಿ ಕನ್ನಡ ಪತ್ರಿಕೆಗಳನ್ನು ಓದುವವರೂ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈಚೆಗೆ ನಡೆದ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸರಾಸರಿ ಒಂದು ಮತಕ್ಕೆ ₹ 25 ಸಾವಿರ ವ್ಯಯಿಸಿವೆ. ರಾಜ್ಯಸಭೆ ಸದಸ್ಯರನ್ನು ಹರಾಜಿನ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಸಕರ ಆಯ್ಕೆಯು ಹೀಗೆ ನಡೆಯುವ ಅಪಾಯ ಇದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.