ADVERTISEMENT

ಬೆಲೆ ಕುಸಿತಕ್ಕೆ ಸೇರ್ಪಡೆಯಾದ ಮಂಗಳೂರು ಸೌತೆ

₹ 1ಕ್ಕೆ ಕುಸಿತ, ಬೆಳೆಗಾರರು ಕಂಗಾಲು

​ಪ್ರಜಾವಾಣಿ ವಾರ್ತೆ
Published 5 ಮೇ 2020, 10:58 IST
Last Updated 5 ಮೇ 2020, 10:58 IST
ಮಂಗಳೂರು ಸೌತೆ
ಮಂಗಳೂರು ಸೌತೆ   

ಮೈಸೂರು: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಮಂಗಳೂರು ಸೌತೆ ಕೆ.ಜಿಗೆ ₹ 1 ಇದ್ದರೆ, ಸಿಹಿಕುಂಬಳ ₹ 2, ಬದನೆ ಹಾಗೂ ಎಲೆಕೋಸು ₹ 3, ಪಡುವಲಕಾಯಿ ₹ 4 ಹಾಗೂ ಟೊಮೆಟೊ ₹ 5ಕ್ಕೆ ಕನಿಷ್ಠ ಧಾರಣೆ ಇದ್ದು, ಬೆಳೆಗಾರರು ತೀವ್ರವಾಗಿ ನಷ್ಟ ಅನುಭವಿಸುವಂತಾಗಿದೆ.

ಸೋಮವಾರ ಒಟ್ಟು 3,278 ಕ್ವಿಂಟಲ್‌ನಷ್ಟು ತರಕಾರಿಗಳು ಆವಕವಾಗಿದ್ದವು. ಇವುಗಳಲ್ಲಿ 985 ಕ್ವಿಂಟಲ್‌ನಷ್ಟು ಟೊಮೆಟೊ ಇದ್ದರೆ, ಸಿಹಿಗುಂಬಳ 720 ಕ್ವಿಂಟಲ್‌, ಎಲೆಕೋಸು 320 ಕ್ವಿಂಟಲ್, ಮಂಗಳೂರು ಸೌತೆ 118 ಕ್ವಿಂಟಲ್‌ನಷ್ಟು ಇತ್ತು. ಆವಕ ಹೆಚ್ಚಾಗಿ, ಬೇಡಿಕೆ ಕಡಿಮೆಯಾದ್ದರಿಂದ ಬೆಲೆಗಳಲ್ಲಿ ಇಳಿಕೆಯಾಗಿದೆ. ‌

ತಮಿಳುನಾಡಿನಿಂದ ಹೆಚ್ಚಾಗಿ ಕ್ಯಾರೆಟ್ ಬಂದಿದ್ದರಿಂದ (115 ಕ್ವಿಂಟಲ್) ಇದರ ದರ ಕೆ.ಜಿಗೆ ₹ 15ಕ್ಕೆ ಇಳಿಕೆಯಾಗಿತ್ತು.

ADVERTISEMENT

ಬೀನ್ಸ್‌ಗೆ ಮಾತ್ರ ಹೆಚ್ಚಿನ ಬೆಲೆ ಇದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. 65 ಕ್ವಿಂಟಲ್‌ನಷ್ಟು ಬಂದಿದ್ದ ಬೀನ್ಸ್‌ನ ಕನಿಷ್ಠ ಧಾರಣೆ ₹ 40 ಇದ್ದರೆ, ಗರಿಷ್ಠ ಧಾರಣೆ ₹ 42 ಇತ್ತು. ಇದರ ಆವಕ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಾಗಿದೆ.

ಉಳಿದಂತೆ, ಹೂಕೋಸು ಕೆ.ಜಿಗೆ ₹ 10, ಹಸಿರುಮೆಣಸಿನಕಾಯಿ ₹ 15, ಬೆಂಡೆಕಾಯಿ ₹ 17, ಬೀಟ್ರೂಟ್ ₹ 7, ಹೀರೆಕಾಯಿ ₹ 20, ದಪ್ಪಮೆಣಸಿನಕಾಯಿ ₹ 17 ಇತ್ತು.

ಈರುಳ್ಳಿಯ ಆವಕ ಹೊರರಾಜ್ಯ ಮತ್ತು ಉತ್ತರ ಕರ್ನಾಟಕದ ಕಡೆಯಿಂದ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಬೇಡಿಕೆಯಲ್ಲಿ ಯಾವುದೇ ಹೆಚ್ಚಳವಾಗುತ್ತಿಲ್ಲ. ಹೀಗಾಗಿ, ದರವು ಕುಸಿತ ಕಂಡಿದೆ. ಶನಿವಾರ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ 2,282 ಕ್ವಿಂಟಲ್‌ನಷ್ಟು ಈರುಳ್ಳಿ ಬಂದಿತ್ತು. ಇದರ ದರ ಕೆ.ಜಿಗೆ ₹ 12 ಇತ್ತು.

ಮಾವಿನ ಆವಕ ಮಾರುಕಟ್ಟೆಗೆ ನಿಧಾನವಾಗಿ ಹೆಚ್ಚಾಗುತ್ತಿದ್ದು, ಬೆಲೆಯು ಏರುಗತಿಯಲ್ಲೇ ಇದೆ. ಉತ್ತಮ ಗುಣಮಟ್ಟದ ರಸಪೂರಿ ಕೆ.ಜಿಗೆ ₹ 60 ಇದ್ದರೆ, ಬಾದಾಮಿ ₹ 80 ಹಾಗೂ ಸೆಂದೂರ ₹ 40 ಇದೆ. ಇನ್ನು ಮುಂದೆ ಮಾವಿನ ಆವಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ದರ ಇಳಿಯುವ ವಿಶ್ವಾಸ ಇದೆ ಎಂದು ಹಣ್ಣಿನ ವ್ಯಾಪಾರಿ ಸೋಮಶೇಖರ ತಿಳಿಸಿದರು.

ಕೋಳಿಮೊಟ್ಟೆ ದರವು ಈ ವಾರವೂ ಚೇತರಿಕೆ ಪಡೆಯಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.41ರಲ್ಲಿ ಸೋಮವಾರ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.