ಮೈಸೂರು: ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮೀಪ ನಟ ವಿಷ್ಣುವರ್ಧನ್ ಉದ್ಯಾನದಲ್ಲಿ ಶುಕ್ರವಾರ ರಾತ್ರಿ ಸ್ಥಾಪಿಸಿದ್ದ ವಿಷ್ಣುವರ್ಧನ್ ಪ್ರತಿಮೆಯನ್ನು ಪಾಲಿಕೆಯು ಶನಿವಾರ ಬೆಳಿಗ್ಗೆ ತೆರವುಗೊಳಿಸಿದ್ದನ್ನು ವಿರೋಧಿಸಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
‘10 ವರ್ಷದಿಂದ ಮನವಿ ಸಲ್ಲಿಸಿದರೂ ಪ್ರತಿಮೆ ನಿರ್ಮಾಣವಾಗದೇ ಇದ್ದುದರಿಂದ ಅಭಿಮಾನಿಗಳೇ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅಧಿಕಾರಿಗಳ ಕಾಲಿಗೆ ಬಿದ್ದು, ತೆರವುಗೊಳಿಸದಂತೆ ಒತ್ತಾಯಿಸಿದರೂ ಕರುಣೆ ತೋರಲಿಲ್ಲ. ಜನ್ಮದಿನದಂದೇ ವಿಷ್ಣು ಅವರ ಕೊಲೆಯಾಗಿದೆ’ ಎಂದು ಡಾ.ವಿಷ್ಣುಸೇನಾ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಆಕ್ರೋಶ ವ್ಯಕ್ತಪಡಿಸಿದರು.
‘ಸಮಿತಿಯು ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನವನ್ನು ಆಯೋಜಿಸಿತ್ತು. 200 ಮಂದಿ ರಕ್ತದಾನ ಮಾಡುವವರಿದ್ದರು, ಘಟನೆಯಿಂದ ಅಭಿಮಾನಿಗಳಿಗೆ ನೋವಾಗಿದೆ. ರಾಜ್ಯದಲ್ಲಿ ಇರುವ ಎಲ್ಲ ಅನಧಿಕೃತ ಪ್ರತಿಮೆಗಳನ್ನು ತೆರವುಗೊಳಿಸಲಿ’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.