ADVERTISEMENT

ಶೌರ್ಯದ ನಾಡಾದರೂ ಸ್ವಾತಂತ್ರ್ಯ ಕಳೆದುಕೊಂಡಿದ್ದೇಕೆ? ಉತ್ತರ ಹುಡುಕಬೇಕು– ಸಿಟಿ ರವಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:35 IST
Last Updated 15 ಆಗಸ್ಟ್ 2022, 14:35 IST
ಜೆಎಸ್‌ಎಸ್‌ ಮಹಾವಿದ್ಯಾಪೀಠದಿಂದ ಜೆಎಸ್‌ಎಸ್‌ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವದ
ಜೆಎಸ್‌ಎಸ್‌ ಮಹಾವಿದ್ಯಾಪೀಠದಿಂದ ಜೆಎಸ್‌ಎಸ್‌ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವದ   

ಮೈಸೂರು: ‘ಶೌರ್ಯ ತುಂಬಿದ್ದ ನಾಡಾದರೂ ಸ್ವಾತಂತ್ರ್ಯ ಕಳೆದುಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ನಾವು ಉತ್ತರ ಹುಡುಕಿಕೊಂಡರೆ ಮಾತ್ರ, ಹೋರಾಟದಿಂದ ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದ ಜೆಎಸ್‌ಎಸ್‌ ಮಹಾವಿದ್ಯಾಪೀಠದಿಂದ ಜೆಎಸ್‌ಎಸ್‌ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಗುರು ಎಂದರೇನು ಎನ್ನುವುದೇ ಅರ್ಥವಾಗದ ಕಾಲದಲ್ಲಿ ದೇಶದಲ್ಲಿ ಗುರುಕುಲಗಳು ನಡೆಯುತ್ತಿದ್ದವು. ನಮ್ಮ ತಂತ್ರಜ್ಞಾನ ಮೀರಿಸುವವರು ಹಿಂದಿನಿಂದಲೂ ಯಾರೂ ಇಲ್ಲ. ಆದರೂ ದುರುದ್ದೇಶಪೂರ್ವಕವಾಗಿ ನಮ್ಮ ಬಗ್ಗೆ ಅಪಪ್ರಚಾರ ಮಾಡಲಾಯಿತು. ಅಪನಂಬಿಕೆ ಹಾಗೂ ಕೀಳರಿಮೆ ಮೂಡಿಸುವ ಕೆಲಸ ನಡೆಯಿತು’ ಎಂದರು.

ADVERTISEMENT

‘ಯಾರೂ ಮರುಭೂಮಿಗೆ ಆಕ್ರಮಣ ಮಾಡುವುದಿಲ್ಲ. ಸಮೃದ್ಧಿ ಇರುವ ಕಡೆಯಲ್ಲಷ್ಟೆ ದರೋಡೆಗೆ ಹೊಂಚು ಹಾಕುತ್ತಾರೆ. ದೇಶದಲ್ಲಿ ಸಮೃದ್ಧಿ ಇದ್ದಿದ್ದರಿಂದ ಸಾಲು–ಸಾಲು ದಾಳಿಗಳು ನಡೆದವು. ಆರಂಭದಲ್ಲಿ ಸಮರ್ಥವಾಗಿ ಎದುರಿಸಿದ್ದೆವು. ಸಾಮರ್ಥ್ಯ, ಶೌರ್ಯಕ್ಕೆ, ತ್ಯಾಗಕ್ಕೆ ಕೊರತೆ ಇರಲಿಲ್ಲ. ಆದರೆ, ಸಂಘಟಿತ ಪ್ರಯತ್ನ ಇರಲಿಲ್ಲವಾದ್ದರಿಂದ ಕುತಂತ್ರಕ್ಕೆ ನಾವು ಬಲಿಯಾದೆವು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಕೊರೊನಾ ಬಂದ ಮೇಲೆ ಭಾರತ ಮೇಲೇಳಲು ಸಾಧ್ಯವಾಗುವುದಿಲ್ಲ ಎಂದು ಮುಂದುವರಿದ ದೇಶಗಳು ಭಾವಿಸಿದ್ದವು. ಆದರೆ, ಇಂಥದ್ದನ್ನು ಎದುರಿಸುವ ಸಾಮರ್ಥ್ಯ ಭಾರತಕ್ಕೆ ಹೆಚ್ಚಿದೆ ಎನ್ನುವುದು ಸಾಬೀತಾಗಿದೆ. ಅಲ್ಲದೇ, ಕೋವಿಡ್ ಲಸಿಕೆ ನೀಡಿ ಇತರ ದೇಶದವರ ಪ್ರಾಣವನ್ನೂ ರಕ್ಷಿಸಿದ ಕೀರ್ತಿ ಭಾರತಕ್ಕಿದೆ’ ಎಂದರು.

‘ವ್ಯಾಪಾರಕ್ಕೆ ಬಂದಿದ್ದವರು ನಮ್ಮನ್ನು ಆಳಿದರು. ಒಬ್ಬರಿಗೊಬ್ಬರ ನಡುವೆ ಇರುವ ವೈಮನಸ್ಸು ಬಳಸಿಕೊಂಡು ಒಡೆದರು. ಆದರೆ, ಲಕ್ಷಾಂತರ ಮಂದಿ ತ್ಯಾಗ–ಬಲಿದಾನ, ಪರಿಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆ ಸೇನಾನಿಗಳನ್ನು ಸ್ಮರಿಸಬೇಕು’ ಎಂದು ತಿಳಿಸಿದರು.

‘ಏನೇ ವೈಮನಸ್ಸು– ವಿರೋಧಾಭಾಸವಿದ್ದರೂ ದೇಶದ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಏಕಾಭಿಪ್ರಾಯದಲ್ಲಿ 130 ಕೋಟಿ ಒಕ್ಕೊರಲಿನಿಂದ ದನಿ ಎತ್ತಿದಾಗ, ಜಗತ್ತಿನಲ್ಲಿ ಮತ್ತಷ್ಟು ಬೆಳೆಗುತ್ತದೆ. ಇದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಸಕ ನಿರಂಜನ್, ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಎಚ್‌.ವಿ.ರಾಜೀವ್, ಜೆಎಸ್ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಪಿ.ಮಂಜುನಾಥ್‌ ಮತ್ತು ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.